ಮೈಸೂರು: ಮೈಸೂರು ಹಾಲು ಉತ್ಪಾದಕರ ಸಹಕಾರ ಸಂಘವು (ಮೈಮುಲ್) ಅ.1ರಿಂದ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿನ ದರದಲ್ಲಿ ₹ 2.50 ಕಡಿತಗೊಳಿಸಿದೆ.
‘ಮಳೆ ಹೆಚ್ಚಿದ್ದು, ಹಾಲಿನ ಉತ್ಪಾದನೆಯಲ್ಲಿ ಏರಿಕೆ ಆಗಿರುವುದರಿಂದ ಖರೀದಿ ದರ ಇಳಿಸಲಾಗಿದೆ. ತಮಿಳು
ನಾಡು, ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ಬೇಡಿಕೆ ಕೂಡ ತಗ್ಗಿದೆ. ಈ ಹಿಂದೆ ಬರಗಾಲ ಕಾರಣ ಈ ರಾಜ್ಯಗಳು ನಮ್ಮಿಂದ ಹಾಲು ಖರೀದಿಸುತ್ತಿದ್ದವು’ ಎಂದು ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಶಿವಲಿಂಗೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಾಲಿನ ಪುಡಿ ದರ ಕಡಿಮೆಯಾ
ಗಿದ್ದು, ಖರೀದಿಸುವವರೂ ಇಲ್ಲ. ಹಾಲು ನಮ್ಮಲ್ಲೇ ಉಳಿಯುತ್ತಿದೆ. ಈ ಕಾರಣ ಸೆ. 29ರಂದು ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ. ಜನರಿಗೆ ಮಾರಾಟ ಮಾಡುವ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ’ ಎಂದರು.
ಮೈಮುಲ್ನ ಈ ನಿರ್ಧಾರಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಹಿತಿ ನೀಡದೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ದೂರಿದ್ದಾರೆ.
‘ನಿತ್ಯ ಲೀಟರ್ ಹಾಲಿಗೆ ₹ 25.80 ಬರುತ್ತಿತ್ತು. ಸರ್ಕಾರ ನೀಡುವ ಪ್ರೋತ್ಸಾಹ
ಧನ ಬ್ಯಾಂಕ್ ಖಾತೆ ಸೇರುತ್ತದೆ. ಆದರೆ, ಭಾನುವಾರ ಬೆಳಿಗ್ಗೆ ಕೇವಲ ₹23.30 ನೀಡಿದರು. ಹೈನುಗಾರಿಕೆಯನ್ನೇ ನಂಬಿ ಜೀವನ ಸಾಗಿಸುತ್ತಿರುವವರಿಗೆ ಈ ನಿರ್ಧಾರದಿಂದ ಹೊಡೆತ ಬಿದ್ದಿದೆ’ ಎಂದು ಎಚ್.ಡಿ.ಕೋಟೆ ತಾಲ್ಲೂಕಿನ ಗಂಗಡ ಹೊಸಹಳ್ಳಿ ಎನ್.ರಾಜು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.