ಬೆಂಗಳೂರು: ನಗರದ ರಸ್ತೆಗಳ ಕಸ ವಿಲೇವಾರಿಯಾಗದೇ ತ್ಯಾಜ್ಯದ ಸಮಸ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ನಗರದ ರೈಲು ನಿಲ್ದಾಣದಲ್ಲೂ ತ್ಯಾಜ್ಯದ ಸಮಸ್ಯೆ ತಲೆದೋರಿದೆ.
ರೈಲ್ವೆ ಇಲಾಖೆಯ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರಿಗೆ ಮೂರು ತಿಂಗಳಿನ ಹಣ ಪಾವತಿಯಾಗದೇ ರೈಲ್ವೆ ನಿಲ್ದಾಣದ ತ್ಯಾಜ್ಯ ನಿಲ್ದಾಣಗಳಲ್ಲೇ ಉಳಿದಿದೆ.
ತ್ಯಾಜ್ಯ ವಿಲೇವಾರಿ ವಿಭಾಗದ ಪೌರ ಕಾರ್ಮಿಕರಿಗೆ ಮೂರು ತಿಂಗಳಿಂದ ವೇತನ ಬಿಡುಗಡೆಯಾಗಿಲ್ಲ. ಹೀಗಾಗಿ ಅವರು ನಿಲ್ದಾಣದಲ್ಲಿ ಕಸ ಎತ್ತದೇ ಪ್ರತಿಭಟನೆ ನಡೆಸುತ್ತಿದ್ದಾರೆ. ತಮಗೆ ಬಾಕಿ ನೀಡಬೇಕಿರುವ ವೇತನವನ್ನು ಶೀಘ್ರವೇ ನೀಡಬೇಕೆಂದು ಗುತ್ತಿಗೆದಾರರನ್ನು ಆಗ್ರಹಿಸಿದ್ದಾರೆ.
`ಗುತ್ತಿಗೆದಾರರಿಗೇ ಬಾಕಿ ಹಣ ಪಾವತಿಯಾಗದೇ ಇರುವುದರಿಂದ ಪೌರ ಕಾರ್ಮಿಕರಿಗೂ ವೇತನ ಬಿಡುಗಡೆಯಾಗುತ್ತಿಲ್ಲ~ ಎಂದು ರೈಲ್ವೆ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.
ವಿಭಾಗೀಯ ರೈಲು ವ್ಯವಸ್ಥಾಪಕ ಅನಿಲ್ ಕುಮಾರ್ ಅಗರ್ವಾಲ್ ಮಾತನಾಡಿ, `ನಾನು ಸುಮಾರು 2-3 ದಿನಗಳಿಂದ ನಗರದಲ್ಲಿರಲಿಲ್ಲ. ಆದ್ದರಿಂದ ಪರಿಸ್ಥಿತಿಯ ಬಗ್ಗೆ ನನಗೆ ಯಾವುದೇ ಮಾಹಿತಿಯಿಲ್ಲ. ಹಳೆಯ ಗುತ್ತಿಗೆದಾರರೊಂದಿಗೆ ಕೆಲವು ಭಿನ್ನಾಭಿಪ್ರಾಯಗಳಿದ್ದು, ಹೊಸದಾಗಿ ಗುತ್ತಿಗೆ ಟೆಂಡರ್ ಕರೆಯುವವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ~ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.