ಬೆಂಗಳೂರು: ರಾಮನಗರ - ಮಂಡ್ಯ ಜೋಡಿ ರೈಲು ಮಾರ್ಗ, ಚಿಕ್ಕಮಗಳೂರು - ಕಡೂರು, ಶ್ರವಣಬೆಳಗೊಳ - ಹಿರಿಸಾವೆ, ನಾಗಮಂಗಲ - ಸೋಲೂರು ರೈಲ್ವೆ ಮಾರ್ಗ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ರೂ 445 ಕೋಟಿ ಮೀಸಲಿಡಲಾಗಿದೆ.
ಗದಗ - ವಾಡಿ, ಗದಗ - ಹಾವೇರಿ ಹಾಗೂ ಶ್ರೀನಿವಾಸಪುರ - ಮದನಪಲ್ಲಿ ಮಾರ್ಗ ನಿರ್ಮಾಣ ಕಾರ್ಯವನ್ನು ರೈಲ್ವೆ ಇಲಾಖೆಯ ಜೊತೆ ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.
ಖಾಸಗಿ ಸಹಭಾಗಿತ್ವದಡಿ ತದಡಿಯಲ್ಲಿ ರೂ 3,000 ಕೋಟಿ ಅಂದಾಜು ವೆಚ್ಚದ ಬಂದರು ನಿರ್ಮಿಸುವ ಕಾಮಗಾರಿಯನ್ನು ಕೇಂದ್ರ ಸರ್ಕಾರದ ಸಹಕಾರದಿಂದ ಕೈಗೆತ್ತಿಕೊಳ್ಳಲಾಗುವುದು. ಕಾರವಾರ ಮತ್ತು ತದಡಿ ಬಂದರು ನಡುವೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.
ಏಷ್ಯಾ ಅಭಿವೃದ್ಧಿ ಬ್ಯಾಂಕ್ನ ಸಾಲದ ನೆರವಿನಿಂದ ಕೈಗೆತ್ತಿಕೊಳ್ಳಲು ನಿರ್ಧರಿಸಿರುವ ರೂ 170 ಕೋಟಿ ವೆಚ್ಚದ ಉಳ್ಳಾಲ ಸಮುದ್ರ ತೀರ ನಿರ್ವಹಣಾ ಯೋಜನೆ ಕಾಮಗಾರಿಯನ್ನು 2012-13ರಲ್ಲಿ ಕೈಗೆತ್ತಿಕೊಳ್ಳುವ ನಿರೀಕ್ಷೆ ಸರ್ಕಾರಕ್ಕಿದೆ.
ಹುಬ್ಬಳ್ಳಿ - ಅಂಕೋಲ ರೈಲು ಮಾರ್ಗ ನಿರ್ಮಾಣದಲ್ಲಿ ಆಸಕ್ತಿ ತೋರಿಸಿರುವ ಸರ್ಕಾರ, ಈ ಯೋಜನೆ ಮುಂದುವರಿಸಲು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಪರಿಸರ ಇಲಾಖೆಯನ್ನು ಕೋರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.