ADVERTISEMENT

ರೌಡಿ ಮೇಲೆ ಗುಂಡಿನ ದಾಳಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 19:27 IST
Last Updated 9 ಜುಲೈ 2019, 19:27 IST

ಮಂಗಳೂರು: ನಗರ ಸಿಲ್ವರ್‌ಗೇಟ್‌ ಬಳಿ ಭಾನುವಾರ ನಸುಕಿನ ಜಾವ ಮಾವಿನಹಣ್ಣಿನ ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ, ಹಣ ದೋಚಿದ್ದ ಪ್ರಕರಣದಲ್ಲಿ ಮಂಗಳವಾರ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ರೌಡಿ ಭುವಿತ್‌ ರಾಜ್‌ ಎಂಬಾತ ಹಲ್ಲೆಗೆ ಯತ್ನಿಸಿದ್ದು, ಪೊಲೀಸರು ಗುಂಡಿಕ್ಕಿ ಆತನನ್ನು ಬಂಧಿಸಿದ್ದಾರೆ.

ಸರಿಪಳ್ಳ ನಿವಾಸಿಯಾಗಿರುವ ರೌಡಿ ಭುವಿತ್ ರಾಜ್ (35) ಬಂಧನಕ್ಕೆ ಕಂಕನಾಡಿ ನಗರ ಠಾಣೆ ಪೊಲೀಸರು ತೆರಳಿದ್ದರು. ಕಾರನ್ನು ಬೆನ್ನಟ್ಟಿ ಹೋಗುತ್ತಿದ್ದಾಗ ತಲವಾರು ಮತ್ತು ಚೂರಿಯಿಂದ ಕಾನ್‌ಸ್ಟೆಬಲ್‌ ವಿನೋದ್‌ ಮೇಲೆ ಆತ ಹಲ್ಲೆ ನಡೆಸಿದ್ದಾನೆ. ತಕ್ಷಣವೇ ಇನ್‌ಸ್ಪೆಕ್ಟರ್‌ ಅಶೋಕ್‌ ಅವರು ಭುವಿತ್‌ ರಾಜ್‌ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಗೊಂಡು ಕುಸಿದುಬಿದ್ದ ಆತನನ್ನು ಬಂಧಿಸಲಾಗಿದೆ.

ಭುವಿತ್‌ ರಾಜ್‌ ಜೊತೆಗಿದ್ದು, ಪರಾರಿಗೆ ಯತ್ನಿಸಿದ ಸಂದೇಶ್ (25), ಸನತ್ (22), ಆರೋಪಿಗಳಿಗೆ ಬೈಕ್ ನೀಡಿ ಸಹಕರಿಸಿದ ಅಶ್ವತ್ಥ್ (25) ಎಂಬುವವರನ್ನೂ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಆರೋಪಿಗಳು ಕುಲಶೇಖರದ ಸಿಲ್ವರ್‌ ಗೇಟ್‌ ಬಳಿ ಭಾನುವಾರ ನಸುಕಿನ ಜಾವ ಅಕ್ರಮ ಗೋ ಸಾಗಣೆ ಶಂಕೆಯ ನೆಪದಲ್ಲಿ ಮಾವಿನ ಹಣ್ಣು ಸಾಗಣೆ ಲಾರಿಯನ್ನು ಅಡ್ಡಗಟ್ಟಿದ್ದರು. ಮೂವರ ಮೇಲೆ ಹಲ್ಲೆ ನಡೆಸಿ ₹ 70,000 ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎಂಬ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.