ಬೆಂಗಳೂರು: ಕುಂದಲಹಳ್ಳಿ ಮುಖ್ಯರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗುರುರಾಜಶೆಟ್ಟಿ (35) ಮತ್ತು ರೂಬೇಶ್ ಮಹಾಲಿಂಗಂ (34) ಎಂಬ ಇಬ್ಬರು ಸಾಫ್ಟ್ವೇರ್ ಕಂಪೆನಿ ಉದ್ಯೋಗಿಗಳು ಸಾವನ್ನಪ್ಪಿದ್ದಾರೆ.
ಮುಂಬೈ ಮೂಲದ ಗುರುರಾಜಶೆಟ್ಟಿ, ವೈಟ್ಫೀಲ್ಡ್ ಸಮೀಪದ ಸೀಗೆಹಳ್ಳಿಯಲ್ಲಿ ವಾಸವಾಗಿದ್ದರು. ರೂಬೇಶ್ ತಮಿಳುನಾಡು ಮೂಲದವರಾಗಿದ್ದು, ನಗರದ ಚನ್ನಸಂದ್ರದಲ್ಲಿ ನೆಲೆಸಿದ್ದರು.
ಇಬ್ಬರೂ ಕುಂದಲಹಳ್ಳಿ ಮುಖ್ಯರಸ್ತೆಯ ಬ್ರೂಕ್ಫೀಲ್ಡ್ನಲ್ಲಿರುವ ಇಂಟೆಲ್ ಸಾಫ್ಟ್ವೇರ್ ಕಂಪೆನಿಯಲ್ಲಿ ಉದ್ಯೋಗಿಗಳಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಎಂದಿನಂತೆ ಶುಕ್ರವಾರ ಕೆಲಸಕ್ಕೆ ಹೋಗಿದ್ದ ಅವರು, ಮಧ್ಯಾಹ್ನ 2.15ರ ಸುಮಾರಿಗೆ ಊಟಕ್ಕೆಂದು ಟಿನ್ಫ್ಯಾಕ್ಟರಿ ಸಮೀಪದ ಹೋಟೆಲ್ಗೆ ಹೋಗಿದ್ದಾರೆ. ಊಟ ಮುಗಿಸಿಕೊಂಡು ಬೈಕ್ನಲ್ಲಿ ಕಂಪೆನಿಗೆ ಹಿಂದಿರುಗುವಾಗ ಈ ದುರ್ಘಟನೆ ನಡೆದಿದೆ.
ಕೆ.ಆರ್.ಪುರ ಕಡೆಗೆ ಹೋಗುತ್ತಿದ್ದ ಲಾರಿ ಅವರ ಬೈಕ್ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕೆಳಗೆ ಬಿದ್ದ ರೂಬೇಶ್ ಮೇಲೆ ವಾಹನದ ಚಕ್ರ ಹರಿದಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ತಲೆಗೆ ಗಂಭೀರ ಪೆಟ್ಟು ಬಿದ್ದು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುರುರಾಜಶೆಟ್ಟಿ, ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ 12ಕ್ಕೆ ಕೊನೆಯುಸಿರೆಳೆದರು.
ಚಾಲಕನನ್ನು ಬಂಧಿಸಿ, ಲಾರಿ-ಯನ್ನು ಜಪ್ತಿ ಮಾಡಲಾಗಿದೆ ಎಂದು ವೈಟ್ಫೀಲ್ಡ್ ಸಂಚಾರ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ: ಮಹಿಳೆ ಸಾವು
ಸುಮನಹಳ್ಳಿ ವರ್ತುಲ ರಸ್ತೆಯಲ್ಲಿ ಶನಿವಾರ ಬೆಳಗಿನ ಜಾವ ಅಪರಿಚಿತ ವಾಹನ ಹರಿದು ಯಶೋಧಮ್ಮ (50) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಲಗ್ಗೆರೆ ನಿವಾಸಿಯಾದ ಯಶೋಧಮ್ಮ, ಮಗಳಾದ ಕೆಂಗೇರಿಯಲ್ಲಿರುವ ಇಂದ್ರಾಣಿ ಮನೆಗೆ ಹೊರಟಿದ್ದರು. ಬೆಳಿಗ್ಗೆ 4.20ರ ಸುಮಾರಿಗೆ ಸಮೀಪದ ಬಸ್ ನಿಲ್ದಾಣಕ್ಕೆ ನಡೆದು ಹೋಗುವಾಗ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಕೆಳಗೆ ಬಿದ್ದ ಅವರ ಮೇಲೆ ವಾಹನದ ಚಕ್ರ ಹರಿದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ತಿಳಿಸಿದ್ದಾರೆ.
ವಾಹನ ಡಿಕ್ಕಿ ವ್ಯಕ್ತಿ ಸಾವು
ಗೊರಗುಂಟೆಪಾಳ್ಯದಲ್ಲಿ ಶನಿವಾರ ಅಪರಿಚಿತ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಅವರ ವಯಸ್ಸು ಸುಮಾರು 40 ರಿಂದ 45 ವರ್ಷ. ಬೆಳಿಗ್ಗೆ 6.15ಕ್ಕೆ ಗೊರಗುಂಟೆಪಾಳ್ಯದಲ್ಲಿ ರಸ್ತೆ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಯಶವಂತಪುರ ಸಂಚಾರ ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಯಶವಂತಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.