ADVERTISEMENT

ಲೆಕ್ಕಪರಿಶೋಧಕರಿಗೆ ಬಡ್ತಿ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 20:15 IST
Last Updated 20 ಡಿಸೆಂಬರ್ 2013, 20:15 IST

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಇಲಾಖೆಯ ಲೆಕ್ಕಪರಿಶೋಧಕರಿಗೆ ಬಡ್ತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಆಧ್ಯಕ್ಷ ಮಾರುತಿ ಮಾನ್ಪಡೆ ಆಗ್ರಹಿಸಿದರು.

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರಿ ನೌಕರರ ಸಂಘವು ಗುರುವಾರ ಪುರಭವನದಲ್ಲಿ ಆಯೋ­­ಜಿಸಿದ್ದ  ನೌಕರರ  ರಾಜ್ಯ ಸಮ್ಮೇ­ಳ­ನದಲ್ಲಿ ಅವರು ಮಾತನಾಡಿದರು.

‘ಲೆಕ್ಕಪರಿಶೋಧಕರಿಗೆ ಬಡ್ತಿ ನೀಡಲು ಇಲಾಖೆಯಲ್ಲಿ ಅವಕಾಶ­ವಿಲ್ಲ. ಬಡ್ತಿ ನೀಡಲು ಅಗತ್ಯವಿರುವ ಹುದ್ದೆಗಳನ್ನು ಇಲಾಖೆ ಸೃಷ್ಟಿಸಬೇಕು. ಈಗಾಗಲೆ ನಿವೃತ್ತರಾಗಿರುವ ನೌಕರ­ರಿಗೆ ಸೂಕ್ತ ಪಿಂಚಣಿ ವ್ಯವಸ್ಥೆ ಮಾಡಬೇಕು ಎಂದು ಗ್ರಾಮೀ­ಣಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

ಅಖಿಲ ಭಾರತ ಸರ್ಕಾರಿ ನೌಕರರ ಒಕ್ಕೂಟದ ಉಪಾಧ್ಯಕ್ಷ ಮಹಾ­ದೇವಯ್ಯ ಮಠಪತಿ ಮಾತನಾಡಿ, ‘ಬೆಂಗಳೂರು ನಗರದಲ್ಲಿ ಸರ್ಕಾರಿ ನೌಕರರಿಗೆ ಶೇ 30 ರಷ್ಟು ಮನೆ ಬಾಡಿಗೆ ಭತ್ಯೆ ನೀಡುತ್ತಿದ್ದು ಇದನ್ನು ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೂ ವಿಸ್ತರಿಸಬೇಕು’ ಎಂದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ.ನಾಡಗೌಡ, ಸಂಘದ ರಾಜ್ಯ ಸಂಚಾಲಕ ಎಚ್.ಎಸ್.ಚಟ್ರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.