ಬೆಂಗಳೂರು: ಅಪಾರ್ಟ್ಮೆಂಟ್ ಜಾಗದ ಸಮೀಕ್ಷೆ ನಡೆಸಲು ₨ 22 ಲಕ್ಷ ಲಂಚ ಕೇಳಿದ ಸರ್ವೇಯರ್ ವಾಸು ಎಂಬುವವರು ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅನ್ವಯ ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಗರದ ಬಿ.ಕೆ. ರಾಜೇಂದ್ರನ್ ಎಂಬುವವರು ವಿಠೋಲಾ ಎಂಬ ಹೆಸರಿನಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಿದ್ದರು. ಇದರ ಸುತ್ತಲಿನ ಆವರಣ ಗೋಡೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ಒಡೆದುಹಾಕಿದ್ದರು. ಅಪಾರ್ಟ್ಮೆಂಟ್ ಜಾಗದ ಸಮೀಕ್ಷೆ ಮಾಡಿಕೊಡಲು ಸರ್ವೇಯರ್ ವಾಸು ಅವರು ಲಂಚಕ್ಕೆ ಬೇಡಿಕೆ ಇಟ್ಟರು.
ಲಂಚ ಕೊಡಲು ಮನಸ್ಸು ಬಾರದ ಕಾರಣ ರಾಜೇಂದ್ರನ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು. ವಾಸು ಅವರ ಬಂಧನಕ್ಕೆ ಲೋಕಾಯುಕ್ತ ಪೊಲೀಸರು ಬೀಸಿದ ಬಲೆ ಯಶಸ್ವಿಯಾಗಿದ್ದು, ಅವರು ಮಂಗಳವಾರ ₨ 5 ಲಕ್ಷ ಮುಂಗಡ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ವಿಶೇಷ ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣದ ತನಿಖೆ ಜಾರಿಯಲ್ಲಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.