ಬೆಂಗಳೂರು: ಶಾಂತಿನಗರ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್ಟಿಒ) ಕಚೇರಿಯ ಅಧೀಕ್ಷಕ ಓಂಕಾರಮೂರ್ತಿ, ವಿಷಯ ನಿರ್ವಾಹಕರಾದ ಕೃಷ್ಣಮೂರ್ತಿ ಮತ್ತು ತಿಪ್ಪೇಸ್ವಾಮಿ ಅವರು ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಇವರನ್ನು ಬಂಧಿಸಿರುವ ಲೋಕಾಯುಕ್ತ ಪೊಲೀಸರು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಿದ್ದಾರೆ. ಗಾಯತ್ರಿ ನಗರದ ಆಟೊ ಚಾಲಕ ಆರ್.ಸಿ.ಚಂದ್ರು ಎಂಬುವರಿಗೆ ಆಟೊ ರಿಕ್ಷಾದ ಪರವಾನಗಿ ವರ್ಗಾವಣೆ ಮಾಡಬೇಕಿತ್ತು.
ಇದಕ್ಕೆ ಅವರು ಶಾಂತಿನಗರದ ಆರ್ಟಿಒ ಕಚೇರಿ ಸಂಪರ್ಕಿಸಿದರು. ಪರವಾನಗಿ ವರ್ಗಾವಣೆಗೆ ಆರೋಪಿಗಳು ್ಙ1,000 ಲಂಚ ಕೇಳಿದರು. ಲಂಚ ನೀಡಲು ಒಪ್ಪದ ಚಂದ್ರು ಲೋಕಾಯುಕ್ತ ಪೊಲೀಸರಲ್ಲಿ ದೂರು ದಾಖಲಿಸಿದರು. ಚಂದ್ರ ಸ್ನೇಹಿತ ಗಂಗರಾಜು ಅವರಿಂದಲೂ ಆರೋಪಿಗಳು ್ಙ 9,000 ಲಂಚ ಕೇಳಿದ್ದರು.
ಆರೋಪಿಗಳು ಸೋಮವಾರ ರೂ10,000 ಲಂಚ ಪಡೆಯುತ್ತಿರುವ ವೇಳೆ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇವರ ಜೊತೆ ಅಲ್ತಾಫ್ ಎಂಬ ಖಾಸಗಿ ವ್ಯಕ್ತಿಯೊಬ್ಬರನ್ನೂ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.