ಬೆಂಗಳೂರು: ಸಾರಿಗೆ ಇಲಾಖೆ ಅಧಿಕಾರಿಗಳು ಬಣ್ಣದ ಗಾಜು (ಟಿಂಟ್) ತೆಗೆಸದ ವಾಹನಗಳ ಮಾಲೀಕರ ವಿರುದ್ಧ ನಗರದಲ್ಲಿ ಮಂಗಳವಾರ ಒಂದೇ ದಿನ ಸುಮಾರು 500 ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಿದ್ದಾರೆ.
ನಗರದ ಹತ್ತು ವಲಯಗಳಲ್ಲೂ ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿದ ಸಾರಿಗೆ ಇಲಾಖೆ ಅಧಿಕಾರಿಗಳು (ಆರ್ಟಿಓ) ಕಾರು, ಕ್ಯಾಬ್ ಮತ್ತಿತರ ವಾಹನಗಳ ಗಾಜನ್ನು ಪರಿಶೀಲಿಸಿದರು. ಬಣ್ಣದ ಗಾಜು ತೆಗೆಸದ ವಾಹನಗಳ ಮಾಲೀಕರ ವಿರುದ್ಧ ಮೋಟಾರು ವಾಹನ ಕಾಯ್ದೆ (1988) ಅನ್ವಯ ದೂರು ದಾಖಲಿಸಿ ನೂರು ರೂಪಾಯಿ ದಂಡ ಸಹ ವಿಧಿಸಿದರು.
`ಬಣ್ಣದ ಗಾಜು ತೆಗೆಸದ ವಾಹನಗಳನ್ನು ಪತ್ತೆ ಹಚ್ಚಿ ದೂರು ದಾಖಲಿಸಲು 10 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳ ಅಧಿಕಾರಿಗಳು ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಮಂಗಳವಾರ ಒಂದೇ ದಿನ 400ಕ್ಕೂ ಹೆಚ್ಚು ವಾಹನಗಳನ್ನು ಪತ್ತೆ ಹಚ್ಚಿ ಮಾಲೀಕರಿಗೆ ದಂಡ ವಿಧಿಸಿದ್ದಾರೆ. ಈ ಕಾರ್ಯಾಚರಣೆ ಮುಂದುವರಿಯುತ್ತದೆ~ ಎಂದು ಸಾರಿಗೆ ಇಲಾಖೆ ಆಯುಕ್ತ ಟಿ.ಶಾಮ್ಭಟ್ `ಪ್ರಜಾವಾಣಿ~ಗೆ ತಿಳಿಸಿದರು.
ನಗರದ ಕೆಲವೆಡೆ ವಾಹನ ಮಾಲೀಕರು ಹಾಗೂ ಆರ್ಟಿಓ ಅಧಿಕಾರಿಗಳ ನಡುವೆ ವಾಗ್ವಾದ ಕೂಡ ನಡೆಯಿತು. ಬಣ್ಣದ ಗಾಜನ್ನು ತೆಗೆಸಲು ಮಂಗಳವಾರ ಕಡೆಯ ದಿನವಾಗಿದ್ದರಿಂದ ವಾಹನ ಮಾಲೀಕರು ಗಾಜು ತೆಗೆಸಲು ಅಂಗಡಿಗಳ ಬಳಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.
ವಿವಿಧ ವೃತ್ತಗಳು ಹಾಗೂ ಜಂಕ್ಷನ್ಗಳಲ್ಲಿ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರು ಬಣ್ಣದ ಗಾಜು ತೆಗೆಸದ ವಾಹನಗಳನ್ನು ತಡೆದು, ಬಣ್ಣದ ಗಾಜು ತೆಗೆಸುವಂತೆ ವಾಹನಗಳ ಮಾಲೀಕರಿಗೆ ಸೂಚನೆ ನೀಡಿ ಕಳುಹಿಸಿದರು.
`ಬಣ್ಣದ ಗಾಜು ತೆಗೆಸಲು ಜೂ.5ರವರೆಗೆ ಗಡುವು ನೀಡಲಾಗಿತ್ತು. ಗಡುವಿನ ಅವಧಿ ಮುಗಿದಿದ್ದರೂ ಬಣ್ಣದ ಗಾಜು ತೆಗೆಸದ ವಾಹನಗಳ ಮಾಲೀಕರ ವಿರುದ್ಧ ಮಂಗಳವಾರ ದೂರು ದಾಖಲಿಸದೆ ವಿನಾಯಿತಿ ನೀಡಲಾಯಿತು.
ಆದರೆ, ಬುಧವಾರದಿಂದ (ಜೂ.6) ದೂರು ದಾಖಲಿಸಿ ದಂಡ ವಿಧಿಸಲಾಗುತ್ತದೆ~ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.