ಬೆಂಗಳೂರು: ನಾಗರಬಾವಿ ಮುಖ್ಯರಸ್ತೆಯ ಮೂಡಲಪಾಳ್ಯ ವೃತ್ತದಲ್ಲಿ ಶುಕ್ರವಾರ ಬೆಳಿಗ್ಗೆ ಶಾಲಾ ವಾಹನ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ರವಿಕಿರಣ್ (20) ಎಂಬ ಬಿ.ಕಾಂ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ರವಿಕಿರಣ್, ಮೂಡಲಪಾಳ್ಯದ ಶಿವಾನಂದನಗರ ನಿವಾಸಿ ಈಶ್ವರಪ್ಪ ಎಂಬುವರ ಮಗ.
ರಾಜಾಜಿನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ಓದುತ್ತಿದ್ದರು. ಬೆಳಿಗ್ಗೆ 7.20ರ ಸುಮಾರಿಗೆ ಮನೆಯಿಂದ ಬೈಕ್ನಲ್ಲಿ ಕಾಲೇಜಿಗೆ ಹೋಗುವಾಗ ಮೂಡಲಪಾಳ್ಯ ವೃತ್ತದಲ್ಲಿ ಈ ದುರ್ಘಟನೆ ನಡೆದಿದೆ. ರಾಜರಾಜೇಶ್ವರಿನಗರ ನ್ಯಾಷನಲ್ ಹಿಲ್ ವಿವ್ ಪಬ್ಲಿಕ್ ಶಾಲೆಗೆ ಸೇರಿದ ಬಸ್ ಹಿಂದಿನಿಂದ ರವಿಕಿರಣ್ರ ಬೈಕ್ಗೆ ಗುದ್ದಿದೆ.
ಅಪಘಾತದಿಂದ ಕೆಳಗೆ ಬಿದ್ದ ಅವರ ಮೇಲೆ ವಾಹನ ಹಿಂದಿನ ಚಕ್ರ ಹರಿದ ಪರಿಣಾಮ ರವಿಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ‘ಮಕ್ಕಳನ್ನು ಶಾಲೆಗೆ ಕರೆತರಲು ರಾಜಾಜಿನಗರಕ್ಕೆ ಹೋಗುತ್ತಿದ್ದ ಚಾಲಕ ಕುಮಾರಸ್ವಾಮಿ, ಅಪಘಾತದ ನಂತರ ವಾಹನದೊಂದಿಗೆ ಪರಾರಿಯಾಗಿದ್ದ.
ಈ ಸಂಗತಿ ತಿಳಿದ ಶಾಲಾ ಆಡಳಿತ ಮಂಡಳಿಯ ಅಧಿಕಾರಿಗಳು ಆತನನ್ನು ಸಂಪರ್ಕಿಸಿ ಠಾಣೆಗೆ ಕರೆತಂದರು. ಪ್ರಕರಣ ದಾಖಲಿಸಿಕೊಂಡು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು’ ಎಂದು ವಿಜಯನಗರ ಸಂಚಾರ ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.