ADVERTISEMENT

ವಿಜೃಂಭಣೆಯ ಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 6 ಮೇ 2012, 19:30 IST
Last Updated 6 ಮೇ 2012, 19:30 IST

ಹೊಸಕೋಟೆ: ಪಟ್ಟಣದ ಇತಿಹಾಸ ಪ್ರಸಿದ್ಧ ಅವಿಮುಕ್ತೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ರಥೋತ್ಸವಕ್ಕೆ ಚಾಲನೆ ನೀಡಿದರು. ಸುಡು ಬಿಸಿಲನ್ನೂ ಲೆಕ್ಕಿಸದೇ ಭಕ್ತ ಸಮೂಹ ತೇರನ್ನೆಳೆದು ಭಕ್ತಿಭಾವ ಮೆರೆದರು.

ಸಾವಿರಾರು ಜನ ಭಕ್ತರು ತೇರು ಸಂಚರಿಸುವ ಹಾದಿಯಲ್ಲಿದ್ದು ಪೂಜೆ ಸಲ್ಲಿಸಿದರು. ವಿವಿಧ ಜಾನಪದ ಕಲಾ ತಂಡಗಳು ರಥೊತ್ಸವಕ್ಕೆ ಮೆರಗು ನೀಡಿತ್ತು.ತಹಶೀಲ್ದಾರ್ ಬಿ.ಮಲ್ಲಿಕಾರ್ಜುನ, ರಥೋತ್ಸವ ಸಮಿತಿ ಸಂಚಾಲಕ ಎಚ್.ಜಿ.ತ್ಯಾಗರಾಜ್, ಪುರಸಭೆಯ ಅಧ್ಯಕ್ಷ ಸಿ.ರಾಜಣ್ಣ ಮತ್ತಿತರರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ಆರೋಗ್ಯ ತಪಾಸಣಾ ಶಿಬಿರ : `ಪ್ರತಿಯೊಬ್ಬರೂ ಜೀವನದಲ್ಲಿ ದ್ವೇಷ, ಅಸೂಯೆಗಳನ್ನು ಬಿಟ್ಟು ಸೇವಾ ಮನೋಭಾವ ಬೆಳಸಿಕೊಂಡು ಇತರರಿಗೆ ನೆರವಾಗುವ ಕೆಲಸಗಳನ್ನು ಮಾಡಬೇಕು~ ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಕರೆ ನೀಡಿದರು.

ತಾಲ್ಲೂಕು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ವೈಟ್‌ಫೀಲ್ದ್‌ನ ವೈದೇಹಿ ಆಸ್ಪತ್ರೆಯ ಸಹಯೋಗದೊಂದಿಗೆ ಪಟ್ಟಣದ ಜಿಕೆಬಿಎಂಎಸ್ ಶಾಲೆಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಯಿಶಕ್ತಿ ಆಶ್ರಮದ ಮಂಜುನಾಥ್, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಸೊಣ್ಣಪ್ಪ, ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸಿ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.