ADVERTISEMENT

ವಿಜ್ಞಾನದಿಂದ ದೇಶದ ಅಭಿವೃದ್ಧಿ- ರಾಜ್ಯಪಾಲ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 20:06 IST
Last Updated 23 ಡಿಸೆಂಬರ್ 2012, 20:06 IST

ಬೆಂಗಳೂರು: `ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪ್ರಗತಿ ಹೊಂದಿದರೆ ಮಾತ್ರ ದೇಶವು ಅಭಿವೃದ್ಧಿಯಾಗುತ್ತದೆ' ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದರು.

ಮಲ್ಲೇಶ್ವರ ಲೇಡಿಸ್ ಅಸೋಸಿಯೇಶನ್ ಪ್ರಥಮ ದರ್ಜೆ ಕಾಲೇಜು ನಗರದಲ್ಲಿ ಈಚೆಗೆ ಏರ್ಪಡಿಸಿದ್ದ `ಆರ್ಥಿಕತೆಯ ಉತ್ತೇಜನ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಸಾಮಾಜಿಕ ಉದ್ದಿಮೆಗಳ ಪಾತ್ರ' ಕುರಿತ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಈಗ ಕಲಾವಿಭಾಗದ ಪದವಿಗಳಾದ ಬಿಎ ಮತ್ತು ಎಂಎ ಓದಿದರೆ ಇಂದಿನ ವೇಗದ ಯುಗದಲ್ಲಿ, ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಹೆಜ್ಜೆಯನ್ನು ಹಾಕಲು ಸಾಧ್ಯವಿಲ್ಲ. ಅವುಗಳ ಜತೆಗೆಯೇ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಯ ಕಡೆಗೆ ಹೆಚ್ಚಿನ ಗಮನವನ್ನು ಹರಿಸಬೇಕಾದ ಅಗತ್ಯವಿದೆ' ಎಂದರು.

`ಯಾವುದೇ ಅಡ್ಡದಾರಿಗಳಿಂದ ಪಡೆದ ಯಶಸ್ಸು ಶಾಶ್ವತವಾಗಿರುವುದಿಲ್ಲ. ಬದಲಿಗೆ ಪ್ರಯತ್ನಗಳಿಂದ ಪಡೆದ ಯಶಸ್ಸು ಕೊನೆಯವರೆಗೂ ಉಳಿಯುತ್ತದೆ. ಅಂತಹ ಪ್ರಯತ್ನಗಳಿಂದಲೇ ದೇಶವು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ' ಎಂದು ವಿದ್ಯಾರ್ಥಿನಿಯರಿಗೆ ಕಿವಿ ಮಾತು ಹೇಳಿದರು.

`ಇಂದು ಮಹಿಳೆ ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಆತಂಕವನ್ನುಂಟು ಮಾಡುತ್ತಿವೆ. ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆಯನ್ನು ಒದಗಿಸಬೇಕು. ಎಲ್ಲಿ ಮಕ್ಕಳು ಮತ್ತು ಮಹಿಳೆಯರು ಸಬಲರಾಗಿರುತ್ತಾರೋ ಅಲ್ಲಿ ಉತ್ತಮವಾದ ಸಮಾಜವು ನಿರ್ಮಾಣವಾಗುತ್ತದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.