
ಬೆಂಗಳೂರು: ಈಜಿಪುರದ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ವಾಸವಾಗಿದ್ದ ಶೇಖ್ ಝೈನಬ್ (16) ಎಂಬ ವಿದ್ಯಾರ್ಥಿನಿ ಶುಕ್ರವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದಾಳೆ. ‘ದುಷ್ಕರ್ಮಿಗಳು ಮಗಳನ್ನು ಅಪಹರಿಸಿ ಮುಂಬೈಗೆ ಕರೆದೊಯ್ದಿದ್ದಾರೆ’ ಎಂದು ಆಕೆಯ ತಂದೆ ಕೋರಮಂಗಲ ಠಾಣೆಗೆ ದೂರು ಕೊಟ್ಟಿದ್ದಾರೆ.
‘ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಟಿಂಬರ್ ಯಾರ್ಡ್ ಮಾಲೀಕ ಟಿ.ಜವಾಹರಲಾಲ್ ಎಂಬುವರ ಮಗಳಾದ ಶೇಖ್, ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಳು. ಕಾಲೇಜಿಗೆ ಹೋಗುವುದಾಗಿ ಬೆಳಿಗ್ಗೆ 7.30ಕ್ಕೆ ಪೇಯಿಂಗ್ ಗೆಸ್ಟ್ ಕಟ್ಟಡದಿಂದ ಹೊರಟ ಆಕೆ ವಾಪಸ್ ಬಂದಿಲ್ಲ. ದೂರಿನ ಅನ್ವಯ ತನಿಖೆ ಆರಂಭಿಸಿದ್ದು, ಈಗಾಗಲೇ ಒಂದು ವಿಶೇಷ ತಂಡ ಮುಂಬೈಗೆ ತೆರಳಿದೆ’ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಪ್ರತಿ ರಾತ್ರಿ ಪೋಷಕರಿಗೆ ಕರೆ ಮಾಡಿ ಯೋಗ ಕ್ಷೇಮ ವಿಚಾರಿಸುತ್ತಿದ್ದ ಶೇಖ್, ಶುಕ್ರವಾರ ಕರೆ ಮಾಡಿರಲಿಲ್ಲ. ಹೀಗಾಗಿ ಜವಾಹರಲಾಲ್ ಅವರೇ ರಾತ್ರಿ 8 ಗಂಟೆ ಸುಮಾರಿಗೆ ಮಗಳಿಗೆ ಕರೆ ಮಾಡಿದ್ದಾರೆ. ಆಗ ‘ಬಳಕೆದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ’ ಎಂದು ಮರಾಠಿ ಭಾಷೆಯಲ್ಲಿ ಪ್ರತಿಕ್ರಿಯೆ ಬಂದಿದೆ.
ಇದರಿಂದ ಗಾಬರಿಗೊಂಡ ತಂದೆ ಸತತವಾಗಿ ಕರೆ ಮಾಡಿದ್ದಾರೆ.
ಸ್ವಲ್ಪ ಸಮಯದ ನಂತರ ಸಂಪರ್ಕಕ್ಕೆ ಸಿಕ್ಕ ಮಗಳು, ‘ನಜೀಮಾ ಆಂಟಿ ಜತೆ ಮುಂಬೈಗೆ ಬಂದಿದ್ದೇನೆ’ ಎಂದು ಹೇಳಿದ್ದಾಳೆ. ಆದರೆ, ಮಾತನಾಡುತ್ತಿರುವಾಗಲೇ ಮಗಳ ಮೊಬೈಲ್ ಸ್ವಿಚ್ ಆಗಿದ್ದರಿಂದ ಅನುಮಾನಗೊಂಡ ತಂದೆ, ಪೇಯಿಂಗ್ ಗೆಸ್ಟ್ ಕಟ್ಟಡದ ಮಾಲೀಕರು ಹಾಗೂ ಸಹಪಾಠಿಗಳಿಗೆ ಕರೆ ಮಾಡಿ ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಕೂಡಲೇ ವಿಮಾನ ಪ್ರಯಾಣ ಬೆಳೆಸಿದ ಅವರು, ರಾತ್ರಿ 12 ಗಂಟೆಗೆ ನಗರದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅಲ್ಲಿನ ಅಧಿಕಾರಿಗಳನ್ನು ವಿಚಾರಿಸಿದಾಗ ‘ಇಂದು ಶೇಖ್ ಝೈನಬ್ ಮತ್ತು ನಜೀಮಾ ಹೆಸರಿನ ಯಾವುದೇ ಪ್ರಯಾಣಿಕರು ಮುಂಬೈಗೆ ಪ್ರಯಾಣ ಬೆಳೆಸಿಲ್ಲ’ ಎಂದು ಹೇಳಿದ್ದಾರೆ.
ಶನಿವಾರ ಬೆಳಿಗ್ಗೆ ಪೊಲೀಸರೊಂದಿಗೆ ಕಾಲೇಜಿಗೆ ತೆರಳಿದ ಜವಾಹರಲಾಲ್, ಪ್ರಾಂಶುಪಾಲರು ಮತ್ತು ಮಗಳ ಸಹಪಾಠಿಗಳನ್ನು ವಿಚಾರಿಸಿದ್ದಾರೆ. ಆಗ ವಿದ್ಯಾರ್ಥಿನಿ ಗುರುವಾರದಿಂದ ಕಾಲೇಜಿಗೆ ಬಂದಿಲ್ಲ ಎಂಬ ಸಂಗತಿ ಗೊತ್ತಾಗಿದೆ. ಆ ‘ನಜೀಮಾ ಆಂಟಿ’ ಯಾರೆಂಬುದು ಯಾರಿಗೂ ಗೊತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಒಂದರಿಂದ ಹತ್ತನೇ ತರಗತಿವರೆಗೆ ಸೌದಿ ಅರೇಬಿಯಾದಲ್ಲಿ ಓದಿದ್ದ ಶೇಖ್, ಅಜ್ಜ ಫಕ್ರುದ್ಧೀನ್ ಜತೆ ಇದ್ದಳು. ನಂತರ ಪ್ರಥಮ ಪಿಯುಸಿಗೆ ಕೋರಮಂಗಲದ ಜ್ಯೋತಿ ನಿವಾಸ್ ಕಾಲೇಜಿಗೆ ಸೇರಿದ್ದಳು. ಪೋಷಕರು ಅನಂತಪುರದಲ್ಲಿ ನೆಲೆಸಿರುವುದರಿಂದ ವಿದ್ಯಾರ್ಥಿನಿ ಈಜಿಪುರದ ಸಾಯಿ ಹೆಸರಿನ ಪೇಯಿಂಗ್ ಗೆಸ್ಟ್ ಕಟ್ಟಡದಲ್ಲಿ ವಾಸವಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.