ಬೆಂಗಳೂರು: ಹಲ್ಲೆಗೊಳಗಾಗಿದ್ದ ವಿದ್ವತ್ ಬಿಡುಗಡೆಯ ಸಾರಾಂಶ ಬಹಿರಂಗಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಮಲ್ಯ ಆಸ್ಪತ್ರೆ ಆಡಳಿತ ಮಂಡಳಿ ತನಿಖೆಗೆ ಮುಂದಾಗಿದೆ.
ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಂದ್ರು ವಾದ್ವಾನಿ, ‘ಆಸ್ಪತ್ರೆಯ ಶಿಸ್ತು ಸಮಿತಿ ಸಭೆ ನಡೆಸಿ ತನಿಖೆ ನಡೆಸಲು ತೀರ್ಮಾನಿಸಿದೆ. ಆನಂದ್ ಅವರು ತಜ್ಞ ವೈದ್ಯರ ತಂಡದಲ್ಲಿ ಪ್ರಮುಖವಾಗಿದ್ದಾರೆ. ಇವರನ್ನು ಅಮಾನತು ಮಾಡುವ ಪ್ರಶ್ನೆಯೇ ಇಲ್ಲ. ತನಿಖೆಗೆ ನಮ್ಮದೇ ಆದ ಕೆಲವು ಮಾರ್ಗಸೂಚಿಗಳಿವೆ. ಆ ಪ್ರಕಾರ ತನಿಖೆ ಕೈಗೊಳ್ಳಲಾಗುವುದು’ ಎಂದು ಸ್ಪಷ್ಟಪಡಿಸಿದರು.
ಬುಧವಾರ ನಡೆದ ನಲಪಾಡ್ ಜಾಮೀನು ಅರ್ಜಿ ವಿಚಾರಣೆ ವೇಳೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ಯಾಂಸುಂದರ್ ಅವರು ‘ವೈದ್ಯರ ತೀವ್ರ ಒತ್ತಡದಿಂದಾಗಿ ಮನೆಗೆ ಕಳುಹಿಸಲಾಗಿದೆ. ಅಲ್ಲದೆ ಡಾ.ಆನಂದ್ ಅವರು ಸಹಿ ಮಾಡಿದ ಬಿಡುಗಡೆ ಸಾರಾಂಶ ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ’ ಎಂದು ಹೇಳಿದ್ದರು.
‘ವಿದ್ವತ್ ವೈದ್ಯಕೀಯ ವರದಿಯ ಐದು ಪುಟಗಳನ್ನು ಹ್ಯಾರಿಸ್ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಇದರ ಹಿಂದೆ ಸಾಕ್ಷ್ಯ ನಾಶಪಡಿಸುವ ಉದ್ದೇಶವಿದೆ. ವೈದ್ಯಕೀಯ ವರದಿಯನ್ನು ರೋಗಿಗೆ ಅಥವಾ ಅವರ ಹತ್ತಿರದ ಸಂಬಂಧಿಗಳಿಗೆ ಮಾತ್ರ ಕೊಡಬೇಕು. ಈ ಬಗ್ಗೆ ತನಿಖೆಯಾಗಬೇಕು’ ಎಂದು ಅವರು ಆಗ್ರಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.