ಬೆಂಗಳೂರು: ‘ಅಭಿಮಾನ್ ಸ್ಟುಡಿಯೊ ಮಾಲೀಕರು ಭೂಮಿ ಕೊಡಲು ಒಪ್ಪಿಗೆ ನೀಡಿದ್ದರೂ ಸಮಾಧಿ ನಿರ್ಮಿಸಲು ಕಳೆದ ಎಂಟು ವರ್ಷಗಳಿಂದ ಸರ್ಕಾರ ನಿರ್ಲಕ್ಷ್ಯ ಧೋರಣೆ ತಳೆದಿದೆ. ಆದ್ದರಿಂದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದಿಲ್ಲ’ ಎಂದು ವಿಎಸ್ಎಸ್ ವಿಷ್ಣು ಸೇನಾ ಸಂಘಟನೆಯ ಅಧ್ಯಕ್ಷ ರಾಜುಗೌಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈಸೂರಿನಲ್ಲಿ ಸ್ಮಾರಕ ನಿರ್ಮಿಸುವ ಕೆಲಸ ಕೂಡ ಇನ್ನೂ ಪೂರ್ಣಗೊಂಡಿಲ್ಲ. ಆ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಭಾರತಿ ವಿಷ್ಣುವರ್ಧನ್ ಅವರನ್ನು ಕೇಳಿದಾಗ ‘ಇದರಲ್ಲಿ ನೀವು ಮೂಗು ತೂರಿಸಬೇಡಿ’ ಎಂದು ಹೇಳಿದ್ದಾರೆ. ಅವರ ಮೃದು ಧೋರಣೆಯಿಂದಾಗಿಯೇ ಸ್ಮಾರಕ ವಿಳಂಬವಾಗಿದೆ. ಈಗ ಸಮಾಧಿ ಜಾಗ ಕೂಡ ನಮ್ಮ ಕೈಬಿಟ್ಟು ಹೋಗುತ್ತಿದೆ’ ಎಂದು ಆರೋಪಿಸಿದರು.
‘ಭಾರತಿ ಅವರು ಸಮಾಧಿಗೆ ಬರುತ್ತಿಲ್ಲ. ಮೈಸೂರಿನ ಸ್ಮಾರಕ ಮಾತ್ರ ಸಾಕು ಎಂದು ಹೇಳುತ್ತಿದ್ದಾರೆ. ಆದರೆ, ಅಭಿಮಾನಿಗಳಿಗೆ ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರವಾದ ಜಾಗ ಬೇಕು’ ಎಂದು ಅವರು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.