ಬೆಂಗಳೂರು: ಬೆಂಗಳೂರಿಗೆ ಹಸಿರನ್ನು ಮರಳಿಸಲು ಆರು ಮಂದಿ ಬೆಂಗಳೂರಿಗರು ಕೈಜೋಡಿಸಿದ್ದು ನಗರವಾಸಿಗಳಲ್ಲಿ ಪರಿಸರ ಕುರಿತು ಅರಿವು ಮೂಡಿಸಲು ‘ನೆರಳು’ ವೃಕ್ಷ ಮಹೋತ್ಸವ ಆಯೋಜಿಸಿದ್ದಾರೆ. ನಗರದ ಪಾರಂಪರಿಕ ಪ್ರತಿನಿಧಿಗಳಾಗಿದ್ದ ಮರಗಳ ಹೆಸರಿನಿಂದಲೇ ಗುರುತಿಸಲ್ಪಡುವ ಹುಳಿಮಾವು, ಹಲಸೂರು ಮುಂತಾದ ಪ್ರದೇಶಗಳು ಬೆಂಗಳೂರಿನಲ್ಲಿವೆ.
ಆದರೆ ಅಭಿವೃದ್ದಿ, ಮೂಲಸೌಕರ್ಯದ ಹೆಸರಿನಲ್ಲಿ ಕಳೆದ ಒಂದು ದಶಕದಲ್ಲಿ ನಗರವು ಸಾಕಷ್ಟು ಮರಗಳನ್ನು ಕಳೆದುಕೊಂಡಿದೆ. ಒಂದು ವರ್ಷದಲ್ಲೆ 3000ಕ್ಕೂ ಹೆಚ್ಚು ಮರಗಳಿಗೆ ಬಿಬಿಎಂಪಿ ಕೊಡಲಿ ಬೀಸಿದ್ದು ನಗರದಲ್ಲಿ ಉಳಿದಿರುವ ಮರಗಳೆಷ್ಟು ಎಂಬ ಮಾಹಿತಿಯೂ ಪಾಲಿಕೆಯ ಬಳಿ ಇಲ್ಲ.
ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ಚಿತ್ರ ಕಲಾವಿದ ದೀಪಕ್ ಶ್ರೀನಿವಾಸನ್, ‘ಈ ಹಿಂದೆ ಜನರು ಮರಗಳನ್ನು ತಮ್ಮ ಕುಟುಂಬದ ಸದಸ್ಯರೆಂಬಂತೆ ಪ್ರೀತಿಸುತ್ತಿದ್ದರು. ಅವುಗಳು ನಮ್ಮದು ಎಂಬ ಭಾವನೆ ಅವರಲ್ಲಿತ್ತು. ಈಗ ಅಂತಹ ಭಾವನೆಗಳೆಲ್ಲಾ ಮರೆಯಾಗಿವೆ. ಮರಗಳೊಂದಿಗೆ ಸಂಬಂಧ ಹೊಂದಿರದ ಅಪಾರ ಸಂಖ್ಯೆಯ ವಲಸಿಗರಿಗೆ ನೆರಳು ಕಾರ್ಯಕ್ರಮದಲ್ಲಿ ವೃಕ್ಷಗಳ ಬಗ್ಗೆ ಅರಿವು ಮೂಡಿಸಲಾಗುವುದು ’ ಎನ್ನುತ್ತಾರೆ. ಕಬ್ಬನ್ ಉದ್ಯಾನದಲ್ಲಿ ಫೆ. 8, 9ರಂದು ನಡೆಯಲಿರುವ ನೆರಳು ವೃಕ್ಷ ಮಹೋತ್ಸದಲ್ಲಿ ಭಾಗವಹಿಸಲು ಈಗಾಗಲೆ 80ಕ್ಕೂ ಹೆಚ್ಚು ಮಂದಿ ಆಸಕ್ತಿ ತೋರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.