
ನೆಲಮಂಗಲ: `ರಾಜಕಾರಣ ವೃತ್ತಿಯಾಗಿ ಪರಿವರ್ತನೆ ಹೊಂದಿದೆ. ರಾಜಕಾರಣಿಗಳಿಗೆ ತಮ್ಮ ಕರ್ತವ್ಯ ಅರಿತು ಕೆಲಸ ಮಾಡುವಂತೆ ಮತದಾರರು ಸೂಚಿಸಬೇಕು. ಕರ್ತವ್ಯ ಲೋಪ ಎಸಗಿದ ಜನಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳಬೇಕು' ಎಂದು ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ತಿಳಿಸಿದರು.
ಪಟ್ಟಣದ ಸೇಂಟ್ ಆನ್ಸ್ ಶಾಲೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಹಳೆ ವಿದ್ಯಾರ್ಥಿಗಳ ಸಭೆಯಲ್ಲಿ ಅವರು ಮಾತನಾಡಿದರು.
`ಭ್ರಷ್ಟಾಚಾರ ಹಿಂದಿನಿಂದಲೂ ಇದೆ. ಈಗಿನ ಒಂದೊಂದು ಹಗರಣಗಳು ರಾಜ್ಯದ ಬಜೆಟ್ನಷ್ಟು ದೊಡ್ಡವು. ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಆದರೆ, ಅದನ್ನು ಬೆಳೆಯಲು ಬಿಡ ಬಾರದು' ಎಂದರು.
`ಹೆಣ್ಣುಮಕ್ಕಳ ಶೋಷಣೆ ತಡೆಗೆ ವ್ಯವಸ್ಥೆಯ ಬದಲಾವಣೆ ಆಗಬೇಕು. ಹೆಣ್ಣನ್ನು ಗೌರವದಿಂದ ಕಾಣುವ ಪರಿಪಾಠ ಪ್ರತಿ ಮನೆಯಲ್ಲೂ ಬೆಳೆಯ ಬೇಕಿದೆ. ನಮ್ಮ ಸಂಸ್ಕೃತಿಯನ್ನು ಅರಿತು ನಡೆದರೆ ಶೋಷಣೆ ಕಡಿಮೆಯಾಗ ಬಹುದು' ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ಗೌರವ್, ಹಿಮಾಂಶು, ರಾಹುಲ್ ಮತ್ತು ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.