ಬೆಂಗಳೂರು: ವೃದ್ಧ ದಂಪತಿಯನ್ನು ಅಪಹರಿಸಿದ ದುಷ್ಕರ್ಮಿಗಳು ಕೆಲವೇ ಗಂಟೆಗಳಲ್ಲಿ ಅವರನ್ನು ಬಿಟ್ಟು ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ. ಟಿ.ಬೇಗೂರು ಬಳಿಯ ಅಲಾಳಸಂದ್ರದ ಉಗ್ರನರಸಿಂಹಯ್ಯ (72) ಮತ್ತು ಅನಸೂಯ (68) ಅಪಹರಣಕ್ಕೊಳಗಾಗಿದ್ದ ದಂಪತಿ.
ಅಲಾಳಸಂದ್ರದ ತೋಟದ ಮನೆಯಲ್ಲಿ ದಂಪತಿ ವಾಸವಿದ್ದರು. ಸೋಮವಾರ ರಾತ್ರಿ 7 ಗಂಟೆಯ ಸುಮಾರಿಗೆ ಅವರನ್ನು ಅಪಹರಿಸಲಾಗಿದೆ. ಉಗ್ರನರಸಿಂಹಯ್ಯ ಅವರು ಇತ್ತೀಚೆಗೆ ಜಮೀನು ಮಾರಿದ್ದರು. ಈ ಬಗ್ಗೆ ತಿಳಿದವರೇ ಹಣದ ಆಸೆಗಾಗಿ ದಂಪತಿಯನ್ನು ಅಪಹರಣ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
`ವಿಷಯ ತಿಳಿಯುತ್ತಿದ್ದಂತೇ ತುಮಕೂರು ರಸ್ತೆ, ಕುಣಿಗಲ್, ರಾಮನಗರ ಮುಖ್ಯರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ ಪೊಲೀಸ್ ನಾಕಾಬಂದಿ ಹಾಕಲಾಯಿತು. ಈ ವಿಷಯ ತಿಳಿದು, ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ದುಷ್ಕರ್ಮಿಗಳು ದಂಪತಿಯನ್ನು ಕುಣಿಗಲ್ ಬಳಿಯ ಡಾಬಾವೊಂದರ ಬಳಿ ಬಿಟ್ಟು, ಅವರ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ~ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಡಿ.ಪ್ರಕಾಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.