ADVERTISEMENT

ವೃಷಭಾವತಿ ಪುನಶ್ಚೇತನ: ‘ವೆಚ್ಚ ಭರಿಸಲು ಸಿದ್ಧ’

​ಪ್ರಜಾವಾಣಿ ವಾರ್ತೆ
Published 5 ಜೂನ್ 2017, 19:51 IST
Last Updated 5 ಜೂನ್ 2017, 19:51 IST
ಅನಂತಕುಮಾರ್‌ ಅವರು ಗಿಡ ನೆಟ್ಟರು. ತೇಜಸ್ವಿನಿ ಅನಂತಕುಮಾರ್‌, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ ಇದ್ದಾರೆ.
ಅನಂತಕುಮಾರ್‌ ಅವರು ಗಿಡ ನೆಟ್ಟರು. ತೇಜಸ್ವಿನಿ ಅನಂತಕುಮಾರ್‌, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ ಇದ್ದಾರೆ.   

ಬೆಂಗಳೂರು: ‘ವೃಷಭಾವತಿ ನದಿ ಪುನಶ್ಚೇತನಗೊಳಿಸುವ ಸಂಬಂಧ ಸಮಗ್ರ ಯೋಜನಾ ವರದಿಗೆ (ಡಿಪಿಆರ್) ತಗಲುವ ವೆಚ್ಚವನ್ನು ಅದಮ್ಯ ಚೇತನ ಸಂಸ್ಥೆಯು ಭರಿಸಲು ಸಿದ್ಧವಿದೆ’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್‌ ಹೇಳಿದರು.

ಅದಮ್ಯ ಚೇತನ ಟ್ರಸ್ಟ್‌ ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಜೈವಿಕ ಉದ್ಯಾನದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ 1,000 ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮೈತುಂಬಿ ಹರಿಯುತ್ತಿದ್ದ ವೃಷಭಾವತಿ ನದಿ ಮಿತಿಮೀರಿದ ನಗರೀಕರಣದಿಂದಾಗಿ ಅಸ್ತಿತ್ವ ಕಳೆದುಕೊಂಡಿತು. ಇದರ ಪುನರುಜ್ಜೀವನಕ್ಕಾಗಿ ವಿಶ್ವವಿದ್ಯಾಲಯವು ಡಿಪಿಆರ್‌ ಸಿದ್ಧಪಡಿಸಲು ಮುಂದಾದರೆ, ಅದಕ್ಕೆ ತಗಲುವ ವೆಚ್ಚವನ್ನು ಟ್ರಸ್ಟ್‌ ಭರಿಸಲಿದೆ’ ಎಂದರು.

ADVERTISEMENT

ಶಾಸಕ ಬಸವರಾಜ ಬೊಮ್ಮಾಯಿ ಮಾತನಾಡಿ, ‘ಪ್ರತಿಯೊಬ್ಬರೂ ಹುಟ್ಟುಹಬ್ಬವನ್ನು ಸಸಿ ನೆಡುವ ಮೂಲಕ ಆಚರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬೆಂಗಳೂರು ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿ ಪ್ರೊ. ಎಂ. ಮುನಿರಾಜು, ‘ಜ್ಞಾನಭಾರತಿ ಆವರಣದಲ್ಲಿ ಮರಗಳು ಹಾಗೂ ಈಗ ನೆಟ್ಟಿರುವ ಗಿಡಗಳಿಗೆ ವೃಷಭಾವತಿ ಕಣಿವೆಯ ನೀರನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳುತ್ತೇನೆ’ ಎಂದರು.

*
ರಾಜ್ಯದಾದ್ಯಂತ 60,000ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಒಬ್ಬ ವ್ಯಕ್ತಿಗೆ ಒಂದು ಮರ ಎಂಬುದು ಸಂಸ್ಥೆಯ ಧ್ಯೇಯವಾಗಿದೆ.
-ತೇಜಸ್ವಿನಿ ಅನಂತಕುಮಾರ್‌, ಅಧ್ಯಕ್ಷೆ, ಅದಮ್ಯ  ಚೇತನ ಟ್ರಸ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.