ಬೆಂಗಳೂರು: ಎಂ.ಜಿ. ರಸ್ತೆಯಲ್ಲಿರುವ ಏಕಪರದೆಯ ಶಂಕರನಾಗ್ ಥಿಯೇಟರ್ಗೆ ಮತ್ತೆ ಬೀಗ ಹಾಕಲಾಗಿದೆ. ಬಿಬಿಎಂಪಿಯ ನಿರ್ಲಕ್ಷ್ಯದಿಂದಾಗಿ ಇಲ್ಲಿ ಚಲನಚಿತ್ರಗಳ ಪ್ರದರ್ಶನ ಸ್ಥಗಿತಗೊಂಡಿದೆ ಎಂದು ಚಿತ್ರ ಪ್ರದರ್ಶಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈಯ ಐನಾಕ್ಸ್ ಲೀಸರ್ ಲಿಮಿಟೆಡ್ (ಐ.ಎಲ್.ಎಲ್.) ಕಂಪೆನಿ ಜೊತೆ ಪಾಲಿಕೆ ಮಾಡಿಕೊಂಡಿದ್ದ ಒಪ್ಪಂದದ ಅವಧಿ ಕಳೆದ ವಾರ ಮುಗಿದಿದೆ. ತಿಂಗಳಿಗೆ ₹ 17.5 ಲಕ್ಷ ಬಾಡಿಗೆಯ ಆಧಾರದಲ್ಲಿ 2009ರಲ್ಲಿ ಗುತ್ತಿಗೆ ನೀಡಲಾಗಿತ್ತು.
ಕೇವಲ ಕನ್ನಡ ಚಿತ್ರಗಳನ್ನು ಪ್ರದರ್ಶಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ಇದರ ನಿರ್ವಹಣೆಗೆ ಪಾಲಿಕೆ ಹೊಸ ಟೆಂಡರ್ ಕರೆದಿಲ್ಲ. ಇದು ಪಾಲಿಕೆಯ ನಿರಾಸಕ್ತಿಗೆ ಸಾಕ್ಷಿ ಎಂದು ಪ್ರದರ್ಶಕರು ಹೇಳುತ್ತಾರೆ.
ಪಾಲಿಕೆಯ ನಿಯಂತ್ರಣದಲ್ಲಿ ಇದ್ದ ಏಕೈಕ ಥಿಯೇಟರ್ ಇದಾಗಿತ್ತು. ಜಯನಗರ 4ನೇ ಬ್ಲಾಕ್ನ ಪುಟ್ಟಣ್ಣ ಕಣಗಾಲ್ ಚಿತ್ರಮಂದಿರ ಕೆಲವು ವರ್ಷಗಳ ಹಿಂದೆಯೇ ಮುಚ್ಚಿತ್ತು.
ಚಿತ್ರಮಂದಿರಗಳನ್ನು ನಿರ್ವಹಿಸಲು ಪಾಲಿಕೆ ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಪ್ರದರ್ಶಕರು ಆಗ್ರಹಿಸುತ್ತಾರೆ. ನಾವು ₹ 2 ಕೋಟಿ ಭರಿಸಿ ಚಿತ್ರಗಳ ಪ್ರದರ್ಶನಕ್ಕೆ ಸಿದ್ಧರಿದ್ದೇವೆ ಎಂದು ಅವರು ಹೇಳುತ್ತಾರೆ. ಈ ಚಿತ್ರಮಂದಿರವು ಮಲ್ಟಿಪ್ಲೆಕ್ಸ್ಗಳ ಮಾದರಿಯಲ್ಲಿ ಅಭಿವೃದ್ಧಿಗೊಂಡು ಪ್ರೇಕ್ಷಕರ ಅಭಿರುಚಿಯನ್ನು ತಲುಪುವಂತಾಗಬೇಕು ಎನ್ನುತ್ತಾರೆ.
‘ನಾನು ಸೇರಿದಂತೆ 10 ಮಂದಿ ಚಿತ್ರಮಂದಿರದ ನಿರ್ವಹಣೆಗೆ ಸಿದ್ಧರಿದ್ದೇವೆ. ಇದಕ್ಕೆ ಪಾಲಿಕೆ ಸಕಾರಾತ್ಮಕವಾಗಿ ಸ್ಪಂದಿಸಬೇಕು’ ಎಂದು ವಿತರಕ ಮಂಜುನಾಥ್ ವಿನಂತಿಸುತ್ತಾರೆ.
ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಪ್ರತಿಕ್ರಿಯಿಸಿ, ‘ಚಿತ್ರಮಂದಿರದ ನಿರ್ವಹಣೆಗೆ ತಕ್ಷಣ ಟೆಂಡರ್ ಕರೆಯುತ್ತೇವೆ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಜತೆಗೂ ಸಮಾಲೋಚನೆ ನಡೆಸುತ್ತೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.