ಬೆಂಗಳೂರು: 15 ದಿನ ಪೆರೋಲ್ ರಜೆ ಕೋರಿ ಎಐಎಡಿಎಂಕೆ ನಾಯಕಿ ಶಶಿಕಲಾ ವಿ.ನಟರಾಜನ್ ಅವರು ಮಂಗಳವಾರ ಸಲ್ಲಿಸಿದ್ದ ಪೆರೋಲ್ ಅರ್ಜಿಯನ್ನು ತಿರಸ್ಕರಿಸಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು, ಕ್ರಮಬದ್ಧವಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದಾರೆ.
‘ಶಶಿಕಲಾ ಸಲ್ಲಿಸಿರುವ ಅರ್ಜಿಯಲ್ಲಿ ಪತಿಯ ಅನಾರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ದಾಖಲೆಗಳು ಹಾಗೂ ತಾವು ಎದುರಿಸುತ್ತಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಯಾವುದೇ ವಿವರಗಳು ಇರಲಿಲ್ಲ. ಈ ಬಗ್ಗೆ ವಕೀಲರ ದೃಢೀಕೃತ ದಾಖಲೆಗಳ ಪ್ರತಿ ಜತೆ ಮತ್ತೊಮ್ಮೆ ಅರ್ಜಿ ಸಲ್ಲಿಸಿದರೆ, ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಜೈಲು ಅಧಿಕಾರಿಗಳು ಶಶಿಕಲಾ ಅವರಿಗೆ ತಿಳಿಸಿದ್ದಾರೆ.
‘ಪತಿ ನಟರಾಜನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೆಂಡತಿಯಾಗಿ ಈ ಸಂದರ್ಭದಲ್ಲಿ ಅವರನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ. ಹೀಗಾಗಿ, 15 ದಿನಗಳ ತುರ್ತು ಪೆರೋಲ್ ರಜೆ ನೀಡಬೇಕು’ ಎಂದು ಶಶಿಕಲಾ ಎಂಟು ಪುಟಗಳ ಅರ್ಜಿ ಸಲ್ಲಿಸಿದ್ದರು.
‘ಶಶಿಕಲಾ ವಿರುದ್ಧದ ಎರಡು ಕ್ರಿಮಿನಲ್ ಪ್ರಕರಣಗಳು ತನಿಖಾ ಹಂತದಲ್ಲಿರುವುದರಿಂದ ಸಾಮಾನ್ಯ ಪೆರೋಲ್ ನೀಡಲು ಬರುವುದಿಲ್ಲ. ಪತಿಯ ಅನಾರೋಗ್ಯದ ಕಾರಣ ನೀಡಿರುವುದರಿಂದ ತುರ್ತು ಪೆರೋಲ್ ನೀಡಬಹುದು. ಅವರು ಅಗತ್ಯ ದಾಖಲೆಗಳನ್ನು ವಕೀಲರ ಮೂಲಕ ತರಿಸಿಕೊಂಡು ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕು’ ಎಂದು ಜೈಲು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.