ADVERTISEMENT

ಶಸ್ತ್ರಚಿಕಿತ್ಸೆಗೆ ಲಂಚ: ವೈದ್ಯನ ಬಂಧನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:47 IST
Last Updated 18 ಡಿಸೆಂಬರ್ 2013, 19:47 IST

ಬೆಂಗಳೂರು: ಶಸ್ತ್ರಚಿಕಿತ್ಸೆ ಮಾಡಲು ವ್ಯಕ್ತಿಯೊಬ್ಬರಿಂದ ರೂ 7,000 ಲಂಚ ಪಡೆದ ಜಯನಗರ ಜನರಲ್‌ ಆಸ್ಪತ್ರೆ­ಯ ಮೂತ್ರರೋಗ ತಜ್ಞ ಡಾ.ವಿಶ್ವ­ನಾಥ್‌ರನ್ನು ಲೋಕಾಯುಕ್ತ ಪೊಲೀಸ­ರು ಮಂಗಳವಾರ ಬಂಧಿಸಿದ್ದಾರೆ.

ನಗರದ ಶಿವಕುಮಾರ್‌ ಎಂಬು­ವರು ಚಿಕಿತ್ಸೆ ಪಡೆಯುವ ಸಲುವಾಗಿ ಜಯ­ನಗರ ಜನರಲ್‌ ಆಸ್ಪತ್ರೆಗೆ ತೆರಳಿದ್ದರು. ಶಸ್ತ್ರಚಿಕಿತ್ಸೆ ನಡೆಸಲು ರೂ 8 ಸಾವಿರ ಲಂಚ ನೀಡುವಂತೆ ಒತ್ತಾ­ಯಿಸಿದ್ದರು. ಶಿವ­ಕುಮಾರ್‌ ಅವರು ಆಸ್ಪತ್ರೆಗೆ ದಾಖ­ಲಾದರೂ, ಲಂಚ ನೀಡಿಲ್ಲ ಎಂಬ ಕಾರಣಕ್ಕೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿರ­ಲಿಲ್ಲ. ಬಳಿಕ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು.

ಶಿವಕುಮಾರ್‌ ಮತ್ತೆ ವಿಶ್ವನಾಥ್‌ ಅವರನ್ನು ಭೇಟಿ ಮಾಡಿ ಚಿಕಿತ್ಸೆ ಸಂಬಂಧ ಮಾತುಕತೆ ನಡೆಸಿದ್ದರು. ರೂ 7,000 ಲಂಚ ನೀಡಿದರೆ ಶಸ್ತ್ರಚಿಕಿತ್ಸೆ ನಡೆಸು­ವುದಾಗಿ ವೈದ್ಯರು ಬೇಡಿಕೆ ಇರಿಸಿದ್ದರು. ಮಂಗಳವಾರ ಹಣ­ದೊಂದಿಗೆ ಆಸ್ಪತ್ರೆಗೆ ಬರುವಂತೆ ಸೂಚಿಸಿ­ದ್ದರು. ಈ ಕುರಿತು, ಶಿವ­ಕುಮಾರ್‌ ಅವರು ಸೋಮವಾರ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಮಂಗಳವಾರ ಆಸ್ಪತ್ರೆಗೆ ತೆರಳಿದ ಶಿವಕುಮಾರ್‌ ಅವರು ಡಾ.ವಿಶ್ವ­ನಾಥ್‌ ಅವರಿಗೆ ಹಣ ನೀಡಿದರು. ತಕ್ಷಣ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿ­ದರು. ಪ್ರಾಥಮಿಕ ವಿಚಾರಣೆ ಬಳಿಕ ವಿಶ್ವನಾಥ್‌ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎಚ್‌.ಎನ್‌.ಸತ್ಯನಾರಾಯಣ ರಾವ್‌ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.