ADVERTISEMENT

ಶಸ್ತ್ರಚಿಕಿತ್ಸೆಗೆ ಲಂಚ: ವೈದ್ಯನ ಬಂಧನ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:47 IST
Last Updated 18 ಡಿಸೆಂಬರ್ 2013, 19:47 IST

ಬೆಂಗಳೂರು: ಶಸ್ತ್ರಚಿಕಿತ್ಸೆ ಮಾಡಲು ವ್ಯಕ್ತಿಯೊಬ್ಬರಿಂದ ರೂ 7,000 ಲಂಚ ಪಡೆದ ಜಯನಗರ ಜನರಲ್‌ ಆಸ್ಪತ್ರೆ­ಯ ಮೂತ್ರರೋಗ ತಜ್ಞ ಡಾ.ವಿಶ್ವ­ನಾಥ್‌ರನ್ನು ಲೋಕಾಯುಕ್ತ ಪೊಲೀಸ­ರು ಮಂಗಳವಾರ ಬಂಧಿಸಿದ್ದಾರೆ.

ನಗರದ ಶಿವಕುಮಾರ್‌ ಎಂಬು­ವರು ಚಿಕಿತ್ಸೆ ಪಡೆಯುವ ಸಲುವಾಗಿ ಜಯ­ನಗರ ಜನರಲ್‌ ಆಸ್ಪತ್ರೆಗೆ ತೆರಳಿದ್ದರು. ಶಸ್ತ್ರಚಿಕಿತ್ಸೆ ನಡೆಸಲು ರೂ 8 ಸಾವಿರ ಲಂಚ ನೀಡುವಂತೆ ಒತ್ತಾ­ಯಿಸಿದ್ದರು. ಶಿವ­ಕುಮಾರ್‌ ಅವರು ಆಸ್ಪತ್ರೆಗೆ ದಾಖ­ಲಾದರೂ, ಲಂಚ ನೀಡಿಲ್ಲ ಎಂಬ ಕಾರಣಕ್ಕೆ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿರ­ಲಿಲ್ಲ. ಬಳಿಕ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು.

ಶಿವಕುಮಾರ್‌ ಮತ್ತೆ ವಿಶ್ವನಾಥ್‌ ಅವರನ್ನು ಭೇಟಿ ಮಾಡಿ ಚಿಕಿತ್ಸೆ ಸಂಬಂಧ ಮಾತುಕತೆ ನಡೆಸಿದ್ದರು. ರೂ 7,000 ಲಂಚ ನೀಡಿದರೆ ಶಸ್ತ್ರಚಿಕಿತ್ಸೆ ನಡೆಸು­ವುದಾಗಿ ವೈದ್ಯರು ಬೇಡಿಕೆ ಇರಿಸಿದ್ದರು. ಮಂಗಳವಾರ ಹಣ­ದೊಂದಿಗೆ ಆಸ್ಪತ್ರೆಗೆ ಬರುವಂತೆ ಸೂಚಿಸಿ­ದ್ದರು. ಈ ಕುರಿತು, ಶಿವ­ಕುಮಾರ್‌ ಅವರು ಸೋಮವಾರ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ಮಂಗಳವಾರ ಆಸ್ಪತ್ರೆಗೆ ತೆರಳಿದ ಶಿವಕುಮಾರ್‌ ಅವರು ಡಾ.ವಿಶ್ವ­ನಾಥ್‌ ಅವರಿಗೆ ಹಣ ನೀಡಿದರು. ತಕ್ಷಣ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿ­ದರು. ಪ್ರಾಥಮಿಕ ವಿಚಾರಣೆ ಬಳಿಕ ವಿಶ್ವನಾಥ್‌ ಅವರನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎಚ್‌.ಎನ್‌.ಸತ್ಯನಾರಾಯಣ ರಾವ್‌ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.