ಬೆಂಗಳೂರು: `ಎಲ್ಲರೂ ಪ್ರೀತಿ, ಕ್ಷಮೆ, ಸೇವೆಯ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ದೇಶದಲ್ಲಿ ಶಾಂತಿ ಕಾಪಾಡಲು ನೆರವಾಗಬೇಕು' ಎಂದು ರಾಜಸ್ಥಾನದ ರಾಜ್ಯಪಾಲರಾದ ಮಾರ್ಗರೇಟ್ ಆಳ್ವ ಕರೆ ನೀಡಿದರು. ರಾಷ್ಟ್ರೀಯ ಕ್ರಿಶ್ಚಿಯನ್ ಸಮಿತಿಯು ಶುಕ್ರವಾರ ಜಯನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಬಡತನದಲ್ಲಿ ಇರುವ ಜನರ ಬಗ್ಗೆ ಕೇವಲ ಕನಿಕರ ಪಡದೇ ಅವರಿಗೆ ಸಹಾಯ ಮಾಡಬೇಕು. ದ್ವೇಷ ಭಾವನೆ ಮರೆತು ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು' ಎಂದರು. `ದೇಶದಲ್ಲಿ ಕ್ರಿಶ್ಚಿಯನ್ ಸಮುದಾಯವು ಅಲ್ಪಸಂಖ್ಯಾತ ಸಮುದಾಯವಾಗಿದ್ದರೂ ಶಿಕ್ಷಣ, ಆರೋಗ್ಯ, ಸಮಾಜ ಸೇವೆ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದೆ' ಎಂದು ಹೇಳಿದರು.
`ಭಾರತ ಒಂದು ಜಾತ್ಯತೀತ ರಾಷ್ಟ್ರ. ಮುಸಲ್ಮಾನರೊಬ್ಬರು ರಾಷ್ಟ್ರಪತಿಗಳಾಗುವುದು, ಕ್ರಿಶ್ಚಿಯನ್ನರು ಮಂತ್ರಿಗಳಾಗುವುದು ಭಾರತದಲ್ಲಿ ಮಾತ್ರ ಸಾಧ್ಯ. ಎಷ್ಟೇ ಜಾತಿ, ಧರ್ಮಗಳಿದ್ದರೂ ಸಹ ನಾವೆಲ್ಲಾ ಭಾರತೀಯರು. ಎಲ್ಲ ಸಮುದಾಯದವರು ಒಂದಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು' ಎಂದು ನುಡಿದರು.
ನಿವೃತ್ತ ನ್ಯಾಯಮೂರ್ತಿ ಎಸ್.ಆರ್.ನಾಯಕ್, ವಿಧಾನಪರಿಷತ್ ಸದಸ್ಯ ಗೋವಿಂದರಾಜು, ಶಾಸಕರಾದ ಕೆ.ಜೆ.ಜಾರ್ಜ್, ಎನ್.ಎ.ಹ್ಯಾರೀಸ್, ಬೌದ್ಧ ಗುರು ಗೇಷಿ ತೇನ್ಜಿಯ ನಮ್ಖಾ, ಜಿ.ಎನ್ಆರ್.ಗ್ರೂಪ್ನ ಅಧ್ಯಕ್ಷ ಜಿ.ಎನ್.ಆರ್,ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.