ಬೆಂಗಳೂರು: ಮಲ್ಲೇಶ್ವರದ ಕ್ಲೋನಿ ಕಾನ್ವೆಂಟ್ ಆವರಣದಲ್ಲಿ ಧಡಂ-ಧುಡುಕಿ (ಸೀ-ಸಾ) ಆಟವಾಡುತ್ತಿದ್ದ ವೇಳೆ ಬಿದ್ದು ಗಾಯಗೊಂಡ ಬಾಲಕಿ ನಿತ್ಯಾನಂದಿನಿಯ (10) ತಂದೆ ಮೋಹನ್ ಕುಮಾರ್, ಶಾಲಾ ಆಡಳಿತ ಮಂಡಳಿ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಮಲ್ಲೇಶ್ವರ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.
ಈ ಸಂಬಂಧ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಮೋಹನ್ಕುಮಾರ್, `ಶಾಲಾ ಆವರಣದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದೆ. ಅಲ್ಲದೇ, ಘಟನೆ ನಡೆದು ದಿನ ಕಳೆದರೂ ಮಗುವನ್ನು ನೋಡಲು ಶಾಲೆಯಿಂದ ಯಾರೊಬ್ಬರು ಆಸ್ಪತ್ರೆಗೆ ಬಂದಿಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದರು.
`ಕೆಲವು ಶಿಕ್ಷಕರು ಮೊಬೈಲ್ಗೆ ಕರೆ ಮಾಡಿ ಮಗುವಿನ ಆರೋಗ್ಯ ತಪಾಸಣೆ ಬಗ್ಗೆ ವಿಚಾರಿಸಿದ್ದಾರೆ. ಆದರೆ, ನಂದಿನಿ ಶೀಘ್ರ ಗುಣಮುಖಳಾಗಲಿ ಎಂದು ಆಶಿಸಿದ್ದನ್ನು ಬಿಟ್ಟರೆ ಯಾರೊಬ್ಬರು ಆಸ್ಪತ್ರೆ ಬಳಿ ಸುಳಿದಿಲ್ಲ~ ಎಂದರು.
`ಶಾಲೆ ಆರಂಭವಾಗುವುದಕ್ಕೂ ಮುಂಚೆಯೇ ಮಕ್ಕಳನ್ನು ಶಾಲೆ ಆವರಣದಲ್ಲಿ ಬಿಡಬೇಕು ಎಂದು ಆಡಳಿತ ಮಂಡಳಿಯ ಮುಖ್ಯಸ್ಥರು ಹೇಳುತ್ತಾರೆ. ಆದರೆ, ಶಾಲೆ ಆರಂಭವಾಗುವುದಕ್ಕೂ ಮುನ್ನ ಈ ಘಟನೆ ನಡೆದಿರುವುದರಿಂದ ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಶಿಕ್ಷಕರು ಹೇಳುತ್ತಾರೆ. ಘಟನೆಯ ಹೊಣೆ ಹೊರಲು ಯಾರೊಬ್ಬರೂ ಸಿದ್ಧರಿಲ್ಲ. ಹೀಗಾಗಿ ದೂರು ದಾಖಲಿಸಿ ಹೋರಾಟ ಮಾಡುತ್ತಿದ್ದೇನೆ~ ಎಂದು ಹೇಳಿದರು.
`ನನ್ನ ಮಗಳು ಮಾನಸಿಕ ಅಸ್ವಸ್ಥಳು. ಆಕೆಗೆ ವಿಶೇಷ ಕಾಳಜಿಯ ಅಗತ್ಯವಿದೆ. ಆದರೆ, ಇಂತಹ ಮಕ್ಕಳ ಬಗ್ಗೆ ಕಾಳಜಿ ತೆಗೆದುಕೊಳ್ಳುವುದಾದರೂ ಹೇಗೆ? ಎಂದು ಶಿಕ್ಷಕರು ಉದಾಸೀನರಾಗಿ ಮಾತನಾಡುತ್ತಾರೆ. ವೈದ್ಯರು ಮಗುವಿನ ಗದ್ದಕ್ಕೆ ಶಸ್ತ್ರ ಚಿಕಿತ್ಸೆ ಮಾಡಿ, ಲೋಹದ ಪ್ಲೇಟ್ಗಳನ್ನು ಅಳವಡಿಸಿದ್ದಾರೆ. ಒಂದು ತಿಂಗಳು ದ್ರವ ರೂಪದ ಆಹಾರ ಕೊಡುವಂತೆ ಸೂಚಿಸಿದ್ದಾರೆ~ ಎಂದು ಮೋಹನ್ ಕುಮಾರ್ ಅಳಲು ತೋಡಿಕೊಂಡರು.
ಆದರೆ, ಮೋಹನ್ ಅವರ ಆರೋಪವನ್ನು ತಳ್ಳಿ ಹಾಕಿರುವ ಶಾಲಾ ಆಡಳಿತ ಮಂಡಳಿ, `ನಂದಿನಿ ಪೋಷಕರು ಹೇಳುವಂತೆ ನಮ್ಮ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿಲ್ಲ. ಇದೊಂದು ಅನಿರೀಕ್ಷಿತ ಘಟನೆ. ಮಕ್ಕಳ ಬಗ್ಗೆ ನಮಗೂ ವಿಶೇಷ ಕಾಳಜಿ ಇದೆ. ನಂದಿನಿ ಗಾಯಗೊಂಡ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೇವೆ. ಘಟನೆ ನಂತರ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಶಾಲಾ ಆವರಣದಲ್ಲಿ ಒಬ್ಬ ಸೆಕ್ಯುರಿಟಿ ಗಾರ್ಡ್ನನ್ನು ನೇಮಕ ಮಾಡಿದ್ದೇವೆ~ ಎಂದರು.
`ಬಾಲಕಿ ಮುಖಕ್ಕೆ ತೀವ್ರ ತರದ ಪೆಟ್ಟಾಗಿದೆ. ಶಸ್ತ್ರಚಿಕಿತ್ಸೆ ಮಾಡಿದ ನಂತರ ಆಕೆ ಚೇತರಿಸಿಕೊಂಡಿದ್ದಾಳೆ~ ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆ ವೈದ್ಯ ಡಾ.ಅರವಿಂದ್ ಕಾಸರಗೋಡು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.