ಹೊಸಕೋಟೆ: ಸ್ಥಳೀಯ ಶಾಸಕ ಎನ್. ನಾಗರಾಜು ಅವರ ಮೊಬೈಲ್ ಗೆ ಕರೆ ಮಾಡಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ ವ್ಯಕ್ತಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂ ಕಿನ ಮಹೇಶ್ (19) ಬಂಧಿತ ಆರೋಪಿ. ಆರೋಪಿಗೆ ಮಾತನಾಡಲು ಮೊಬೈಲ್ ಕೊಟ್ಟು ಸಹಕರಿಸಿದ ಆತನ ಸ್ನೇಹಿತ ಹೊಸಪೇಟೆ ತಾಲ್ಲೂಕು ಮರಿಯಮ್ಮನ ಹಳ್ಳಿಯ ಸತೀಶ್ (21) ಎಂಬಾತನನ್ನೂ ಬಂಧಿಸಲಾಗಿದೆ.
ಆರೋಪಿ ಮಾ.20 ರಂದು ಶಾಸಕರಿಗೆ ಕರೆ ಮಾಡಿ ₨ 3 ಕೋಟಿಗೆ ಬೇಡಿಕೆ ಇಟ್ಟಿದ್ದ. ಆರೋಪಿ ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೊಮಾ ಕೋರ್ಸ್ ಮುಗಿಸಿದ್ದು ನಿರುದ್ಯೋಗಿ ಆಗಿದ್ದ. ಸುಲ ಭವಾಗಿ ಹಣ ಮಾಡುವ ಉದ್ದೇಶದಿಂದ ಶಾಸಕರ ಮಾಹಿತಿಯನ್ನು ಪಡೆದು ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ನಾಗರಾಜು ಅವರು ಕೊಟ್ಟ ದೂರಿನ ಮೇರೆ ಆರೋಪಿ ಮೊಬೈಲ್ ನ ಜಾಡು ಹಿಡಿದ ಪೊಲೀಸರು ಆತನನ್ನು ಹೊಸಪೇಟೆ ಯಲ್ಲಿ ಬಂಧಿಸಿದರು.
ಈ ಹಿಂದೆ ಮಾಜಿ ಸಚಿವ ಸಿದ್ದು ನ್ಯಾಮೇಗೌಡ ಹಾಗೂ ಮಾಜಿ ಸಚಿವ ಆನಂದ್ ಸಿಂಗ್ ಅವರಿಗೂ ಬೆದರಿಕೆ ಹಾಕಿ ಸೆರೆಮನೆ ವಾಸ ಅನುಭವಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಬ್ಬರನ್ನು ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.