ಬೆಂಗಳೂರು: ತಮ್ಮ ಬ್ಯಾಂಕ್ ಖಾತೆಯಿಂದ ಅಪರಿಚಿತರು ₹ 1.90 ಲಕ್ಷ ಡ್ರಾ ಮಾಡಿದ್ದಾರೆ ಎಂದು ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಮಾರ್ಚ್ 19ರಂದು ಬನಶಂಕರಿ ಠಾಣೆಗೆ ದೂರು ಕೊಟ್ಟಿದ್ದಾರೆ.
ಎಫ್ಐಆರ್ನಲ್ಲಿ ದೂರುದಾರ ಯೋಗೇಶ್ವರ್ ಅವರ ವೃತ್ತಿ ‘ಮೆಕ್ಯಾನಿಕ್’ ಎಂದು ನಮೂದಿಸಲಾಗಿದೆ. ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೆ.ಸಿ.ರಸ್ತೆ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ.
‘ನಾನು ವಿದೇಶ ಪ್ರವಾಸದಲ್ಲಿದ್ದಾಗ ನನ್ನ ಎಟಿಎಂ ಕಾರ್ಡ್ನ ಪಾಸ್ವರ್ಡ್ ಕದ್ದಿರುವ ಅಪರಿಚಿತರು, ಮಾರ್ಚ್ 17 ಹಾಗೂ 18ರಂದು ₹ 1.90 ಲಕ್ಷ ಡ್ರಾ ಮಾಡಿದ್ದಾರೆ. ಪುಣೆ ಹಾಗೂ ಮುಂಬೈನ ಎಟಿಎಂ ಘಟಕಗಳಿಂದ ಹಣ ಡ್ರಾ ಆಗಿದೆ’ ಎಂದು ಯೋಗೇಶ್ವರ್ ದೂರಿನಲ್ಲಿ ತಿಳಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ವಂಚನೆ ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ. ಯಾವ್ಯಾವ ಎಟಿಎಂ ಘಟಗಳಿಂದ ಹಣ ಡ್ರಾ ಆಗಿದೆ ಎಂಬ ಬಗ್ಗೆ ಮಾಹಿತಿ ಕೊಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಎಟಿಎಂ ಕಾರ್ಡ್ ದೂರುದಾರರ ಬಳಿಯೇ ಇದ್ದರೂ, ಬೇರೆಡೆ ಹಣ ಡ್ರಾ ಆಗಿದೆ. ಅಂದರೆ, ಸ್ಕಿಮ್ಮಿಂಗ್ ಸಾಧನದ ಮೂಲಕ ನಕಲಿ ಕಾರ್ಡ್ ತಯಾರಿಸಿ ಹಣ ದೋಚಿರುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.