ADVERTISEMENT

ಶಿವಗಂಗೆ ಬೆಟ್ಟದಿಂದ ಜಿಗಿದ ಯುವಕ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:49 IST
Last Updated 5 ಸೆಪ್ಟೆಂಬರ್ 2013, 19:49 IST

ನೆಲಮಂಗಲ:  ಸಮುದ್ರಮಟ್ಟದಿಂದ 4547 ಅಡಿ ಎತ್ತರದಲ್ಲಿರುವ ಶಿವಗಂಗೆ ಬೆಟ್ಟದಿಂದ ವ್ಯಕ್ತಿಯೊಬ್ಬ ಹಾರಿದ ಘಟನೆ ನಡೆದಿದೆ.
ಬೆಂಗಳೂರಿನ ಮತ್ತಿಕೆರೆ ನಿವಾಸಿ ವಿಜಯ್‌ಕುಮಾರ್ (36) ಬುಧವಾರ ಮಧ್ಯಾಹ್ನ ಬೆಟ್ಟದಿಂದ ಜಿಗಿದಿದ್ದಾರೆ. ಹಾರುವ ವೇಳೆ ಅವರು `ಕಾಪಾಡಿ' ಎಂದು ಕಿರುಚಿಕೊಂಡರು. ಅಲ್ಲೇ ಇದ್ದ ಹೂವು ಹಣ್ಣು ಮಾರುವವರು ಇದನ್ನು ಕಂಡು ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಬುಧವಾರ ಪ್ರಯತ್ನಪಟ್ಟರೂ ಕತ್ತಲಾಗಿದ್ದರಿಂದ ಕಾರ್ಯಾಚರಣೆಯನ್ನು ನಿಲ್ಲಿಸಿದರು.

ಸುಮಾರು 100 ಅಡಿ ಕೆಳಗೆ ಬಿದ್ದಿದ್ದ ವಿಜಯಕುಮಾರ್ ಅವರನ್ನು ಮೇಲೆತ್ತಲು ಗುರುವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಯಿತು. ಅಗ್ನಿಶಾಮಕ ದಳದವರು ಹರಸಾಹಸ ಪಟ್ಟು ವಿಜಯಕುಮಾರ್ ಅವರನ್ನು ರಕ್ಷಿಸಿದ್ದಾರೆ. ಬಳಿಕ ಅವರನ್ನು ಪಟ್ಟಣದ ಎಂ.ಎಸ್.ರಾಮಯ್ಯ ಹರ್ಷ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರ ಮಾಡಿದರು. ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಎರಡು ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾರೆ.

ಸೂಕ್ತ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು ಎಂದು ವೈದ್ಯ ಡಾ.ಸತೀಶ್ ರಮಣ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.