ADVERTISEMENT

ಶೇಷಾದ್ರಿಪುರ ಫೋರ್ಟಿಸ್ ಆಸ್ಪತ್ರೆಯಲ್ಲಿ 3ನೇ ಬಾರಿ ಮೂತ್ರಪಿಂಡ ಕಸಿ.ಇರಾಕಿ ಪ್ರಜೆಗೆ ಯಶಸ್ವಿ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 18:35 IST
Last Updated 8 ಫೆಬ್ರುವರಿ 2011, 18:35 IST


ಬೆಂಗಳೂರು:  ಇಲ್ಲಿಯ ಶೇಷಾದ್ರಿಪುರದ ಫೋರ್ಟಿಸ್ ಆಸ್ಪತ್ರೆಯ ಮೂತ್ರ ಪಿಂಡ ಕಸಿ ತಜ್ಞ ಡಾ.ಮೋಹನ್ ಕೇಶವಮೂರ್ತಿ ಅವರ ನೇತೃತ್ವದ ತಂಡವು ಇರಾಕ್ ಪ್ರಜೆ ಅಬ್ದುಲ್ ಅಮೀರ್ ಮಹ್ದಿ ಅವರಿಗೆ ಮೂರನೇ ಬಾರಿಗೆ ಯಶಸ್ವಿಯಾಗಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನೆರವೇರಿಸುವ ಸಂಕೀರ್ಣ ಚಿಕಿತ್ಸೆಯನ್ನು ಪೂರೈಸಿದೆ.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಸೋಂಕಿನ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಅಮೀರ್ 10 ವರ್ಷದ ಹಿಂದೆಯೇ ಸಮಸ್ಯೆ ಎದುರಿಸಿದ್ದರು. ಮೂರನೇ ಬಾರಿಗೆ ಮೂತ್ರಪಿಂಡ ವೈಫಲ್ಯದೊಂದಿಗೆ, ಮೂತ್ರಪಿಂಡ ಕಸಿ ಚಿಕಿತ್ಸೆಗಾಗಿ ದಾಖಲಾದಾಗ ಉದರದೊಳಗೆ ನಾಲ್ಕು ಕಿಡ್ನಿಗಳನ್ನು ಹೊಂದಿದ್ದರು. ಐದನೇ ಕಿಡ್ನಿ ಕಸಿ ಮಾಡುವುದು ಕಷ್ಟವೇ ಆಗಿತ್ತು. ಮೊದಲು ಕಿಡ್ನಿ ಕಸಿಮಾಡಲು ಸ್ಥಳಾವಕಾಶ ಕಲ್ಪಿಸುವುದು ಮೊದಲ ಸವಾಲು ಆಗಿತ್ತು’ ಎಂದು ಸ್ಮರಿಸಿದರು.‘ಮೂರನೇ ಮೂತ್ರಪಿಂಡ ಕಸಿ ಸಂದರ್ಭ ವೈಫಲ್ಯ ಆಗುವ ಸಂದರ್ಭವೇ ಹೆಚ್ಚು. ಹೀಗಾಗಿ ಹೆಚ್ಚಿನ ಕಟ್ಟೆಚ್ಚರದೊಂದಿಗೆ ಸಿದ್ಧತೆ ಮಾಡಿ ಕೊಳ್ಳಬೇಕಾಗುತ್ತದೆ’ ಎಂದರು.

‘ಈ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಅಮೀರ್ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದು, ಶಸ್ತ್ರಚಿಕಿತ್ಸೆಯ 24 ಗಂಟೆಗಳ ಅವಧಿಯಲ್ಲಿ 15 ಲೀಟರ್ ಮೂತ್ರವನ್ನು ವಿಸರ್ಜಿಸಿದ್ದಾರೆ. 36 ಗಂಟೆಗಳ ಅವಧಿಯಲ್ಲಿ ಸಾಮಾನ್ಯ ಸ್ಥಿತಿಗೆ ಬರುತ್ತದೆ. ರೋಗಿ ಮತ್ತು ದಾನಿ ಇಬ್ಬರು ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ’ ಎಂದು ರೋಗಿಯ ಪ್ರಸ್ತುತ ಸ್ಥಿತಿಯ ಬಗ್ಗೆ ತಿಳಿಸಿದರು.ಶಸ್ತ್ರಚಿಕಿತ್ಸೆಗೆ ಒಳಗಾದ ಅಬ್ದುಲ್ ಅಮೀರ್ ಮಹ್ದಿ ಮಾತನಾಡಿ, ‘ನನ್ನ ಕುಟುಂಬ ಉತ್ತಮ ಸಹಕಾರ ನೀಡಿದೆ. ಉತ್ತಮ ಚಿಕಿತ್ಸೆಯ ಜೊತೆಗೆ, ಮೂತ್ರಪಿಂಡವನ್ನು ದಾನ ಮಾಡಿದೆ. ಮೊದಲ ನನ್ನ ತಂದೆ, ನಂತರ ಹಿರಿಯ ಸಹೋದರ, ಈಗ ಕಿರಿಯ ಸಹೋದರ ದಾನ ಮಾಡಿದ್ದಾರೆ. ನನ್ನ ಕುಟುಂಬ ಮತ್ತು ಅತ್ಯುತ್ತಮ ವೈದ್ಯಕೀಯ ಸೇವೆಯಿಂದಾಗಿ ಸಂಕಷ್ಟದ ಸಮಯವನ್ನು ದಾಟಿ ನಾನು ನಿಮ್ಮ ಮುಂದೆ ಇದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.