ADVERTISEMENT

ಶ್ರೇಷ್ಠ ದರ್ಜೆಯ ವಿ.ವಿ ಬೇಕು

​ಪ್ರಜಾವಾಣಿ ವಾರ್ತೆ
Published 8 ಜೂನ್ 2012, 19:30 IST
Last Updated 8 ಜೂನ್ 2012, 19:30 IST

ಬೆಂಗಳೂರು: ವೈಮಾನಿಕ ಕ್ಷೇತ್ರದಲ್ಲಿ ಜಾಗತಿಕ ಸ್ಪರ್ಧೆ ಎದುರಿಸಲು ಭಾರತ, ಶ್ರೇಷ್ಠ ದರ್ಜೆಯ ವಿಶ್ವವಿದ್ಯಾಲಯಗಳು ಹಾಗೂ ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಬೇಕು ಎಂದು ಗುಡ್‌ರಿಚ್ ಏರೋಸ್ಪೇಸ್ ಸರ್ವಿಸಸ್‌ನ ಉಪಾಧ್ಯಕ್ಷ  ಕ್ರಿಸ್ ರಾವ್ ಸಲಹೆ ನೀಡಿದರು.

ಜಾಗತಿಕ ಹೂಡಿಕೆದಾರರ ಸಮಾವೇಶದ ಎರಡನೆಯ ದಿನವಾದ ಶುಕ್ರವಾರ ಆಯೋಜಿಸಿದ್ದ `ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆಗೆ ಇರುವ ಅವಕಾಶಗಳು~ ಕುರಿತ ಸಭೆಯಲ್ಲಿ ಮಾತನಾಡಿದ ಅವರು, `ವೈಮಾನಿಕ ಹಾಗೂ ರಕ್ಷಣಾ ಕ್ಷೇತ್ರದ ವಹಿವಾಟಿನಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಪಾಲು ಶೇಕಡ 1ರಷ್ಟು ಮಾತ್ರ. ವಿಶ್ವದ ಎಲ್ಲ ರಾಷ್ಟ್ರಗಳು ರಕ್ಷಣಾ ಸಾಮಗ್ರಿಗಳ ಖರೀದಿಗೆ ವಿನಿಯೋಗಿಸುವ ಒಟ್ಟು ಮೊತ್ತದಲ್ಲಿ ಭಾರತದ ಪಾಲು ಶೇಕಡ 2ರಷ್ಟು ಮಾತ್ರ~ ಎಂದು ತಿಳಿಸಿದರು.

ದೇಶದಲ್ಲಿ ಅಗತ್ಯ ಮಾನವ ಸಂಪನ್ಮೂಲ, ಕೌಶಲ್ಯ ಇದೆ. ಆದರೆ ಐರೋಪ್ಯ ರಾಷ್ಟ್ರಗಳ ಜೊತೆ ಸ್ಪರ್ಧಿಸಲು ಈಗಿರುವ ಸಂಪನ್ಮೂಲ ಸಾಲದು. ಕರ್ನಾಟಕ ಕೂಡ ಈ ಕ್ಷೇತ್ರಗಳಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಸಂಶೋಧನೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಪ್ರಯಾಣಿಕ ವಿಮಾನಗಳು ಹಾಗೂ ಯುದ್ಧ ವಿಮಾನಗಳಿಗೆ ಬೇಡಿಕೆ ಪ್ರತಿ ವರ್ಷ ಹೆಚ್ಚುತ್ತಿದೆ. ಆದರೆ ಈ ಕ್ಷೇತ್ರದಲ್ಲಿ ಪ್ರತಿಭಾವಂತ ತಂತ್ರಜ್ಞರ ಕೊರತೆ ಎದುರಾಗಿದೆ ಎಂದು ಅವರು ವಿವರಿಸಿದರು.

 `ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ವಿಮಾನದ ಬಳಕೆ ತೀರಾ ಕಡಿಮೆ. ದೇಶದ ಆರ್ಥಿಕತೆ ಬೆಳೆದಂತೆ ಇಲ್ಲಿನ ವೈಮಾನಿಕ ಕ್ಷೇತ್ರದಲ್ಲೂ ಭಾರಿ ಪ್ರಮಾಣದ ಬೆಳವಣಿಗೆ ಕಂಡುಬರಲಿದೆ~ ಎಂದು ಏರ್‌ಬಸ್ ಕಂಪೆನಿಯ ಭಾರತದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಡೇವಿಡ್ ಡಫ್ರಿನಾಯ್ಸ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.