ADVERTISEMENT

ಸಂಚಾರ ವ್ಯವಸ್ಥೆ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 28 ಮೇ 2012, 19:30 IST
Last Updated 28 ಮೇ 2012, 19:30 IST

ಬೆಂಗಳೂರು: ಚಿತ್ರನಟ ಅಂಬರೀಷ್ ಅವರ 60ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ನಗರದ ಅರಮನೆ ಮೈದಾನದಲ್ಲಿ ಮಂಗಳವಾರ (ಮೇ 29) ಸಂಜೆ `ಅಂಬಿ ಸಂಭ್ರಮ~ ಕಾರ್ಯಕ್ರಮ ಆಯೋಜಿಸಿರುವುದರಿಂದ ಸುತ್ತಮುತ್ತಲ ಪ್ರದೇಶದ ವಾಹನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಳ್ಳಾರಿ ರಸ್ತೆ, ರಮಣ ಮಹರ್ಷಿ ರಸ್ತೆ, ಜಯಮಹಲ್ ರಸ್ತೆ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚಿ ಸಂಚಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಆದ್ದರಿಂದ ವಾಹನ ಸವಾರರು ಬದಲಿ ಮಾರ್ಗಗಳಲ್ಲಿ ಸಂಚರಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.

ವಾಹನ ನಿಲುಗಡೆ: ಆನೇಕಲ್, ಹೊಸೂರು ರಸ್ತೆ, ಕನಕಪುರ, ರಾಮನಗರ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಾಗಡಿ ರಸ್ತೆ ಮತ್ತು ಮೈಸೂರು ಕಡೆಯಿಂದ ಬರುವ ವಾಹನಗಳು ಹೆಬ್ಬಾಳ ಮೇಲ್ಸೇತುವೆ ಮೂಲಕ ಮೇಖ್ರಿ ವೃತ್ತಕ್ಕೆ ಬಂದು ಸರ್ವಿಸ್ ರಸ್ತೆಗೆ ಎಡ ತಿರುವು ಪಡೆದುಕೊಳ್ಳಬೇಕು. ನಂತರ ಜಯಮಹಲ್ ರಸ್ತೆಗೆ ಸಾಗಿ ಅಮಾನುಲ್ಲಾಖಾನ್ ದ್ವಾರ ಅಥವಾ ಸರ್ಕಸ್ ಗ್ರೌಂಡ್ ದ್ವಾರದ ಮೂಲಕ ಅರಮನೆ ಮೈದಾನಕ್ಕೆ ಬಂದು ವಾಹನ ನಿಲುಗಡೆ ಮಾಡಬೇಕು.

ಹೊಸಕೋಟೆ, ಕೋಲಾರ, ಹಳೆ ಮದ್ರಾಸ್ ರಸ್ತೆ, ಎಂಇಜಿ ಸೆಂಟರ್, ಸೇಂಟ್ ಜಾನ್ಸ್ ಚರ್ಚ್ ರಸ್ತೆಯಿಂದ ಬರುವ ವಾಹನಗಳು ನಂದಿದುರ್ಗ ರಸ್ತೆಗೆ ಬಲ ತಿರುವು ಪಡೆದುಕೊಳ್ಳಬೇಕು. ಬಳಿಕ ಸರ್ಕಸ್ ಗೇಟ್ ಮೂಲಕ ಮೈದಾನಕ್ಕೆ ಬರಬೇಕು.

ನೆಲಮಂಗಲ, ಕುಣಿಗಲ್, ನಾಗಮಂಗಲ, ತುಮಕೂರು, ಯಶವಂತಪುರ ಕಡೆಯಿಂದ ಬರುವ ವಾಹನಗಳು ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಬೇಕು. ಬಳಿಕ ಹೊರ ವರ್ತುಲ ರಸ್ತೆ, ಹೆಬ್ಬಾಳ ಮೇಲ್ಸೇತುವೆ, ಬಳ್ಳಾರಿ ರಸ್ತೆ, ಮೇಖ್ರಿ ವೃತ್ತ, ಸರ್ವಿಸ್ ರಸ್ತೆ ಮಾರ್ಗವಾಗಿ ಬಂದು ಎಡ ತಿರುವು ಪಡೆದು ಜಯಮಹಲ್ ರಸ್ತೆಯಲ್ಲಿ ಸಾಗಿ ಅಮಾನುಲ್ಲಾಖಾನ್ ದ್ವಾರದ ಮೂಲಕ ಸರ್ಕಸ್ ಗ್ರೌಂಡ್‌ಗೆ ಬಂದು ವಾಹನ ನಿಲುಗಡೆ ಮಾಡಬೇಕು.

ವಿಶೇಷ ಅತಿಥಿಗಳು ಮತ್ತು ಗಣ್ಯ ವ್ಯಕ್ತಿಗಳ ವಾಹನಗಳು ರಮಣ ಮಹರ್ಷಿ ರಸ್ತೆಯಿಂದ ಅರಮನೆ ಮೈದಾನಕ್ಕೆ ಬರಬೇಕು. ಆ ವಾಹನಗಳ ನಿಲುಗಡೆಗೆ ಸಮಾರಂಭ ಸ್ಥಳದ ಹಿಂಭಾಗದಲ್ಲಿ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.