ADVERTISEMENT

ಸಂಭ್ರಮದ ಶನೈಶ್ಚರ ಜಯಂತಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2012, 19:30 IST
Last Updated 3 ಜೂನ್ 2012, 19:30 IST

ಯಲಹಂಕ: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಕ್ಕೂರು ಬಡಾವಣೆಯಲ್ಲಿರುವ ಶ್ರೀ ಶನೈಶ್ಚರಸ್ವಾಮಿ ದೇವಾಲಯದಲ್ಲಿ ಇತ್ತೀಚೆಗೆ 26ನೇ ವರ್ಷದ ಶ್ರೀ ಶನೈಶ್ಚರಸ್ವಾಮಿ  ಜಯಂತಿ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಮಹೋತ್ಸವದ ಅಂಗವಾಗಿ ಗಣಪತಿ ಪ್ರಾರ್ಥನೆ, ಸ್ವಸ್ತಿಪುಣ್ಯಾಃ, ಗಂಗಾಪೂಜೆ, ಮಂಗಳದ್ರವ್ಯನಯನ ಅಂಕುರಾರ್ಪಣೆ, ಧ್ವಜಾರೋಹಣ, ಯಾಗಶಾಲಾ ಪ್ರವೇಶ 108 ಕಳಶ ಸ್ಥಾಪನೆ, ಅಗ್ನಿಮುಖ ಶ್ರೀ ಗಣಪತಿ ಹೋಮ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀಗಳಿಗೆ ತೈಲಾಭಿಷೇಕ, ನವಧಾನ್ಯ ಅಭಿಷೇಕ, ತಿಲಧಾನ್ಯ ಅಭಿಷೇಕ, ಮಂಗಳ ದ್ರವ್ಯ ಅಭಿಷೇಕ ಮತ್ತು ಪಂಚಾಮೃತಾಭಿಷೇಕ ಮತ್ತು  ಪ್ರಧಾನ ಶ್ರೀ ಶನೈಶ್ಚರ ಸ್ವಾಮಿ `ಸಹಸ್ರನಾಮ ಹೋಮ~  `ಅನ್ನಸಂತರ್ಪಣೆ~ ಹಾಗೂ  ಲೋಕಕಲ್ಯಾ ಣಾರ್ಥವಾಗಿ ಜೇಷ್ಠಾದೇವಿ ಸಮೇತ ಸ್ವಾಮಿಯ ಕಲ್ಯಾಣೋತ್ಸವ ಏರ್ಪಡಿಸಲಾಗಿತ್ತು.

ADVERTISEMENT

ಜಕ್ಕೂರಿನ ಶ್ರೀ ರಾಮಸೇವಾ ಭಜನ ಮಂಡಳಿ ಮತ್ತು ಅಮೃತಹಳ್ಳಿಯ ಶ್ರೀ ಮಾರಮ್ಮದೇವಿ ಭಜನ ಮಂಡಳಿಯವರಿಂದ `ಭಜನೆ ಕಾರ್ಯಕ್ರಮ~ ಶ್ರೀಗಳ ಉಯ್ಯಾಲೋತ್ಸವ ಮತ್ತು ಶಯನೋತ್ಸವ  ಹಾಗೂ ಜೇಷ್ಠಾದೇವಿ ಮತ್ತು ಶ್ರೀಗಳಿಗೆ ವಸಂತೋತ್ಸವ ಸೇವೆಯನ್ನು ಏರ್ಪಡಿಸಲಾಗಿತ್ತು. 

ಉತ್ಸವ: ಶ್ರೀಗಳ ಸನ್ನಿಧಿಯಿಂದ ಸಂಜೆ 7 ಗಂಟೆಗೆ ಹೊರಟ ಸ್ವಾಮಿಯ ಮೆರವ ಣಿಗೆ ಜಕ್ಕೂರು ಹಾಗೂ ಜಕ್ಕೂರು ಬಡಾವಣೆಯ ರಾಜಬೀದಿಗಳಲ್ಲಿ ಸಂಚರಿಸಿ, ರಾತ್ರಿ 12.30 ಗಂಟೆಗೆ ಮತ್ತೆ ದೇವಾಲಯಕ್ಕೆ ಹಿಂದಿರುಗಿತು. ನಾಗಮಂಗಲದ ಎನ್.ರುದ್ರೇಶ್ ಮತ್ತು ತಂಡದವರಿಂದ ವೀರಗಾಸೆ ನೃತ್ಯ, ನಂದೀಧ್ವಜದ ನೃತ್ಯ ಹಾಗೂ  ಬಣ್ಣ, ಬಣ್ಣಗಳಿಂದ ಕೂಡಿದ ವಿವಿಧ ರೀತಿಯ ಬಾಣ ಬಿರುಸು, ಸಿಡಿಮದ್ದಿನ ಆಕರ್ಷಣೆ ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.