ಬೆಂಗಳೂರು: `ಹೊಸ ಸಾಹಿತ್ಯ ರಚನೆಯಾಗದೇ ಸಂಸ್ಕೃತ ಭಾಷೆ ಒಣಗಿದ ಮರದಂತಾಗಿದ್ದು, ಸೃಜನಶೀಲತೆಯನ್ನು ಹರಿಸುವ ಮೂಲಕ ಈ ಭಾಷಾ ಕ್ಷೇತ್ರದಲ್ಲಿ ಹಸಿರುಕ್ರಾಂತಿ ಮಾಡಬೇಕು' ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಸಲಹೆ ನೀಡಿದರು.
ಪ್ರತಿಭಾ ಸಂಸ್ಕೃತ ವಿದ್ಯಾಲಯವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್, ಬಡಾನಿಡಿಯೂರು ವಾಸುದೇವ ಭಟ್ಟ ವಿರಚಿತ `ವಿವಿಧ ದೇವತಾಸ್ತುತಿ ಕುಸುಮಾಂಜಲಿ' ಕಾವ್ಯ ಬಿಡುಗಡೆಮಾಡಿ ಅವರು ಮಾತನಾಡಿದರು.
`ಸಂಸ್ಕೃತ ಭಾಷೆಯಲ್ಲಿ ಹೊಸತನ್ನು ಸೃಷ್ಟಿಸುವ ಪರಂಪರೆ ಹೆಚ್ಚಬೇಕು. ಯುವಪೀಳಿಗೆಗೆ ಸಂಸ್ಕೃತದ ಬಗ್ಗೆ ಆಸಕ್ತಿ ಇಲ್ಲದೇ ಇರುವುದು ಕಂಡುಬರುತ್ತದೆ. ಹಾಗೆಂದು ಭಾಷೆ ಎಂದಿಗೂ ನಿಸ್ತೇಜಗೊಂಡಿಲ್ಲ' ಎಂದು ಹೇಳಿದರು. `ಕನ್ನಡ ಭಾಷೆಯಲ್ಲಿ ಸಂಸ್ಕೃತ ಹಾಲು ಮತ್ತು ಸಕ್ಕರೆಯಂತೆ ಬೆರೆಯಬೇಕು. ಆದರೆ ಕನ್ನಡದೊಂದಿಗೆ ಇಂಗ್ಲಿಷ್ ಬೆರೆತು ಅಕ್ಕಿಯಲ್ಲಿ ಕಲ್ಲು ಸಿಕ್ಕಿದಂತಾಗಿದೆ. ಈ ಬಗ್ಗೆ ಸಂಸ್ಕೃತ ವಿದ್ವಾಂಸರು ಮತ್ತು ಕನ್ನಡ ವಿದ್ವಾಂಸರು ಒಟ್ಟುಗೂಡಿ ಚಿಂತನೆ ನಡೆಸಬೇಕು' ಎಂದು ತಿಳಿಸಿದರು. ಗಾಯಕ ವಿದ್ಯಾಭೂಷಣ ಅವರು `ಗಣೇಶವಾಣಿ' ಎಂಬ ಸಿ.ಡಿ ಬಿಡುಗಡೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.