ಬೆಂಗಳೂರು: ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮದಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಈಗಾಗಲೇ 5 ಸೇವೆಗಳನ್ನು ನೀಡಲಾಗುತ್ತಿದ್ದು, ಡಿಸೆಂಬರ್ 3 ರಿಂದ ಖಾತಾ ವರ್ಗಾವಣೆ, ಖಾತಾ ನೋಂದಣಿ ಹೆಚ್ಚುವರಿ ಸೇವೆಗಳನ್ನು ನೀಡಲಾಗುತ್ತಿದೆ.
ನಾಗರಿಕರು ಸಂಬಂಧಪಟ್ಟ ಸಹಾಯಕ ಕಂದಾಯ ಅಧಿಕಾರಿಗಳ (ಬಿಬಿಎಂಪಿ ವ್ಯಾಪ್ತಿಯಲ್ಲಿ 64 ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಗಳು ಇರುತ್ತವೆ) ಕಚೇರಿಗಳಲ್ಲಿ ರೂ.5/-ನ್ನು ಪಾವತಿಸಿ ನಿಗದಿತ ಅರ್ಜಿಯನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ, ಭರ್ತಿ ಮಾಡಿದ ಅರ್ಜಿಯನ್ನು ಸಹಾಯಕ ಕಂದಾಯ ಅಧಿಕಾರಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಿದ ನಂತರ ಕಡ್ಡಾಯವಾಗಿ 15 ಸಂಖ್ಯೆಯ ಜಿ.ಎಸ್.ಸಿ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಬೇಕು. ಈ ಸೇವೆಗಳನ್ನು ಪಡೆಯಲು 30 ದಿನಗಳನ್ನು ನಿಗದಿಪಡಿಸಲಾಗಿದೆ.
30 ದಿವಸದೊಳಗೆ ಈ ಕೆಲಸ ಆಗದಿದ್ದಲ್ಲಿ, ಕಂದಾಯ ಅಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು. ಈ ಸೇವೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕರೆ ಕೇಂದ್ರದ ಸಂಖ್ಯೆ: 080 -44554455 ಇಲ್ಲಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಅಥವಾ ದೂರು ಸಲ್ಲಿಸಬಹುದು.
ಯಾವ ದಾಖಲೆಗಳು ಬೇಕು
ಖಾತಾ ನೋಂದಣಿಗೆ ಸಂಬಂಧಪಟ್ಟಂತೆ ನಮೂನೆಯಲ್ಲಿ ಅರ್ಜಿ, ದಸ್ತಾವೇಜಿನ ದೃಢೀಕೃತ ಪ್ರತಿ, ಹಿಂದಿನ 10 ವರ್ಷಗಳ ಋಣಭಾರ ಪತ್ರ (ಫಾರಂ-15ರಲ್ಲಿ), ಸಂಬಂಧಪಟ್ಟ ಸಕ್ಷಮ ಅಧಿಕಾರಿಯಿಂದ ನೀಡಲಾದ ಭೂ ಪರಿವರ್ತನಾ ಪತ್ರ, ಸರ್ವೆ ನಕ್ಷೆ/ಟಿಪ್ಪಣಿ ಪ್ರತಿಗಳು , ಭೂ ವಿಂಗಡನೆಯ ಸಂಬಂಧಪಟ್ಟ ನಗರ ಯೋಜನಾ ಇಲಾಖೆ/ಬಿ.ಡಿ.ಎಯಿಂದ ನೀಡಲಾದ ನಿರಾಕ್ಷೇಪಣ ಪತ್ರ ನೀಡಬೇಕು.
ಖಾತಾ ವರ್ಗಾವಣೆಗೆ ಸಂಬಂಧಪಟ್ಟ ನಮೂನೆಯಲ್ಲಿ ಅರ್ಜಿ, ಹಿಂದಿನ ಸಾಲಿನ ಕರ ಸಲ್ಲಿಸಲಾಗಿರುವ ಕರಪತ್ರಗಳು, ಹಕ್ಕು ನಿರೂಪಣಾ ಪತ್ರ, ಪಿತ್ರಾರ್ಜಿತ, ಉಡುಗೊರೆ ಪತ್ರ, ಮರಣ ಹೊಂದಿದರೆ ಮರಣ ಪ್ರಮಾಣ ಪತ್ರ ನೀಡಬೇಕು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.