ADVERTISEMENT

ಸತ್ಯನಾರಾಯಣರಾವ್ ವಿರುದ್ಧ ಖಾಸಗಿ ದೂರು

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:56 IST
Last Updated 11 ಜೂನ್ 2013, 19:56 IST

ಬೆಂಗಳೂರು: ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಸತ್ಯನಾರಾಯಣ ರಾವ್ ಅವರ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ. ಇದರ ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಲಾಗಿದೆ.

ನಿವೃತ್ತ ಐಎಎಸ್ ಅಧಿಕಾರಿ ವೀರಭದ್ರಯ್ಯ ಅವರು ಸಲ್ಲಿಸಿದ್ದ ಸ್ವಯಂ ನಿವೃತ್ತಿ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ರಾವ್ ಅವರು `ಅನುಕೂಲಕರ ವರದಿ' ನೀಡಿದ್ದರು' ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಲಕ್ಷ್ಮೀನಾರಾಯಣ ಎಂಬುವರು ಸಲ್ಲಿಸಿದ ದೂರಿನಲ್ಲಿ ಆರೋಪಿಸಲಾಗಿದೆ.

2012ರ ಅಕ್ಟೋಬರ್ 31ರ ನಂತರ ವೀರಭದ್ರಯ್ಯ ಅವರು ಸ್ವಯಂ ನಿವೃತ್ತಿಗೆ ಅರ್ಹರಾಗಿದ್ದರು. ಆದರೆ ಅವರು 2010ರಲ್ಲೇ ನಿವೃತ್ತಿಗೆ ಅರ್ಜಿ ಸಲ್ಲಿಸಿದರು. ಆದರೆ ವೀರಭದ್ರಯ್ಯ ವಿರುದ್ಧ, ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಆರೋಪದ ಮೇಲೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದ ಕಾರಣ, ಸರ್ಕಾರ ಅರ್ಜಿ ತಿರಸ್ಕರಿಸಿತು.

ಅವರ ಘೋಷಿತ ಆದಾಯ ಮತ್ತು ಆಸ್ತಿಯ ನಡುವೆ ಶೇಕಡ 155ರಷ್ಟು ವ್ಯತ್ಯಾಸ ಕಂಡುಬಂದಿತ್ತು. ವೀರಭದ್ರಯ್ಯ ಅವರು 2012ರ ಡಿಸೆಂಬರ್‌ನಲ್ಲಿ ಅಂದಿನ ಮುಖ್ಯಮಂತ್ರಿಗಳಿಗೆ ಮತ್ತೆ ಮನವಿ ಸಲ್ಲಿಸಿದರು. ಸ್ವಯಂ ನಿವೃತ್ತಿ ನೀಡಿದರೆ, ತಮ್ಮ ವಿರುದ್ಧ ಇರುವ ಪ್ರಕರಣಗಳು ಇತ್ಯರ್ಥ ಆಗುವವರೆಗೆ ಪಿಂಚಣಿ ಪಡೆದುಕೊಳ್ಳುವುದಿಲ್ಲ ಎಂದರು. ಆಗ ಸರ್ಕಾರ ಲೋಕಾಯುಕ್ತದ ಅಭಿಪ್ರಾಯ ಕೋರಿತು. ಸತ್ಯ ಸಂಗತಿಗಳನ್ನು ಮುಚ್ಚಿಟ್ಟ ಎಡಿಜಿಪಿ ರಾವ್ ಅವರು ವೀರಭದ್ರಯ್ಯ ಅವರಿಗೆ ಸ್ವಯಂ ನಿವೃತ್ತಿ ನೀಡಲು ಅನುಕೂಲ ಆಗುವಂತ ವರದಿ ನೀಡಿದರು ಎಂದು ದೂರಿನಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.