ಬೆಂಗಳೂರು: ನಗರದಲ್ಲಿ 83 ಮಹಿಳೆಯರ ಚಿನ್ನದ ಸರಗಳನ್ನು ಕಿತ್ತುಕೊಂಡಿದ್ದ ರೌಡಿ ತಬ್ರೇಜ್ ಖಾನ್ ಅಲಿಯಾಸ್ ಮೊಹಮದ್ ಜಬೀವುದ್ದೀನ್ (33) ಎಂಬಾತನ ವಿರುದ್ಧ ನಗರ ಪೊಲೀಸರು ಗೂಂಡಾ ಕಾಯ್ದೆ ಪ್ರಯೋಗಿಸಿದ್ದಾರೆ.
ಜೆ.ಪಿ.ನಗರ ನಿವಾಸಿಯಾದ ತಬ್ರೇಜ್, ಸಹಚರರಾದ ಅರುಣ್ ಹಾಗೂ ಮಹಮದ್ ಮೆಹತಾಬ್ ಎಂಬುವರ ಜತೆ ಸೇರಿ ಸರಗಳವು ಮಾಡುತ್ತಿದ್ದ.
ಕದ್ದ ಬೈಕ್ಗಳಲ್ಲಿ ನಗರದ ಪ್ರತಿಷ್ಠಿತ ರಸ್ತೆಗಳನ್ನು ಸುತ್ತುತ್ತಿದ್ದ ಇವರು, ಒಂಟಿಯಾಗಿ ಓಡಾಡುವ ಮಹಿಳೆಯಿಂದ ಸರ ದೋಚುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ತಬ್ರೇಜ್ ಹಾಗೂ ಅರುಣ್ನನ್ನು ಇತ್ತೀಚೆಗೆ ಬಂಧಿಸಿದ್ದ ಜಯನಗರ ಪೊಲೀಸರು, ₹ 35 ಲಕ್ಷ ಮೌಲ್ಯದ 1 ಕೆ.ಜಿ 177 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದರು. ವಿಚಾರಣೆಗೆ ಒಳಪಡಿಸಿದಾಗ ಜಯನಗರ ಠಾಣೆಯೊಂದರ ವ್ಯಾಪ್ತಿಯಲ್ಲೇ ಇವರು 29 ಮಹಿಳೆಯರ ಸರ ಕಿತ್ತಿರುವುದು ಗೊತ್ತಾಗಿತ್ತು. ಹೀಗಾಗಿ, ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರು ಗ್ಯಾಂಗ್ನ ಮುಖ್ಯಸ್ಥ ತಬ್ರೇಜ್ ವಿರುದ್ಧ ಗೂಂಡಾ ಕಾಯ್ದೆ ಅಸ್ತ್ರ ಬಳಸಿ ಇದೇ 27ರಂದು (ಶುಕ್ರವಾರ) ಆದೇಶ ಹೊರಡಿಸಿದ್ದಾರೆ.
ವಕೀಲರ ಬೈಕ್ ಕದ್ದಿದ್ದ: 2016ರಲ್ಲಿ ತಮ್ಮ ಪರ ವಕಾಲತ್ತು ವಹಿಸಿದ್ದ ವಕೀಲರ ಬೈಕನ್ನೇ ಕಳವು ಮಾಡಿದ್ದ ತಬ್ರೇಜ್, ಸರಗಳ್ಳತನ ನಡೆಸಲು ಅದನ್ನು ಬಳಸಿದ್ದ. ಈ ಸಂಬಂಧ ವಿವೇಕನಗರ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ, ಆತನ ವಿರುದ್ಧ ರೌಡಿಪಟ್ಟಿ ತೆರೆಯಲಾಗಿತ್ತು.
ಆದರೂ, ಆತನ ಉಪಟಳ ನಿಂತಿರಲಿಲ್ಲ ಎಂದು ಜಯನಗರ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.