ಯಲಹಂಕ: ಬೆಸ್ಕಾಂ ಸಹಕಾರನಗರ ಉಪ ವಿಭಾಗದ ವ್ಯಾಪ್ತಿಯಲ್ಲಿ ಗ್ರಾಹಕರಿಗೆ ಮುನ್ಸೂಚನೆ ನೀಡದೆ ಗುರುವಾರ ಸುಮಾರು ಆರು ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸಿದ ಪರಿಣಾಮ ನಾಗರಿಕರು ತೀವ್ರ ತೊಂದರೆ ಅನುಭವಿಸಿದರು.
ಜಿಕೆವಿಕೆ ಮುಖ್ಯ ದ್ವಾರದಿಂದ ಜಕ್ಕೂರು ಬಡಾವಣೆ ಕಡೆಗೆ 400 ಸ್ಕ್ವೇರ್–ಎಂಎಂ ವಿದ್ಯುತ್ ಕೇಬಲ್ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಗಿತ್ತು. ಇದಕ್ಕಾಗಿ ಮಧ್ಯಾಹ್ನ 2 ಗಂಟೆಗೆ ವಿದ್ಯುತ್ ಕಡಿತಗೊಳಿಸಿದ ಅಧಿಕಾರಿಗಳು, ಸಂಜೆ 8 ಗಂಟೆಗೆ ವಿದ್ಯುತ್ ನೀಡಿದರು. ಈ ಮಧ್ಯೆ ಸಮಸ್ಯೆಯಿಂದ ಬೇಸರಗೊಂಡ ಗ್ರಾಹಕರು, ‘ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ವ್ಯಾಪ್ತಿಯಲ್ಲಿ ನಿರಂತರವಾಗಿ ಇಂತಹ ಸಮಸ್ಯೆಯುಂಟಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಸ್ಕಾಂನ ಸಹಕಾರನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜ್ಕುಮಾರ್ ಪ್ರತಿಕ್ರಿಯಿಸಿ, ‘ ಒಂದೆರಡು ಗಂಟೆಗಳಲ್ಲಿ ಪೂರ್ಣಗೊಳ್ಳಬಹುದೆಂಬ ನಿರೀಕ್ಷೆಯಿಂದ ಕಾಮಗಾರಿ ಕೈಗೊಳ್ಳಲಾಯಿತು. ಆದರೆ ವಿಳಂಬವಾಯಿತು. ಮುಂದಿನ ದಿನಗಳಲ್ಲಿ ಇಂತಹ ತೊಂದರೆ ಆಗದಂತೆ ಎಚ್ಚರ ವಹಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.