ADVERTISEMENT

ಸಹೋದ್ಯೋಗಿ ಕೊಲೆ: ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 19:30 IST
Last Updated 8 ಜೂನ್ 2011, 19:30 IST

ಬೆಂಗಳೂರು: ಸಹೋದ್ಯೋಗಿ ಮಹಿಳೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ನಿಗೂಢ ಪ್ರಕರಣವನ್ನು ಭೇದಿಸಿರುವ ಜೆ.ಪಿ.ನಗರ ಪೊಲೀಸರು ಕಾರ್ಖಾನೆಯೊಂದರ ಉದ್ಯೋಗಿ ಹೇಮಂತ (24) ಎಂಬಾತನನ್ನು ಬಂಧಿಸಿದ್ದಾರೆ.

ಕೆಂಪೇಗೌಡನಗರ ನಿವಾಸಿ ಜನಾರ್ದನ ಎಂಬುವರ ಪತ್ನಿ ಪುಷ್ಪಲತಾ ಅವರನ್ನು ಆರೋಪಿ ಕೊಲೆ ಮಾಡಿದ್ದ. ಹೇಮಂತ ಮತ್ತು ಪುಷ್ಪಲತಾ ಗಣಪತಿಪುರದ ಮಾರುತಿ ಪ್ಯಾಕೇಜಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಜನಾರ್ದನ ಅನಾರೋಗ್ಯದಿಂದ ಬಳಲುತ್ತಿದ್ದರು. ಪತಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಬೇಕು ಎಂದು ಗೆಳತಿಯ ಬಳಿ ಪುಷ್ಪಲತಾ ಹೇಳಿದ್ದನ್ನು ಹೇಮಂತ ಕೇಳಿಸಿಕೊಂಡಿದ್ದ.

ದೊಡ್ಡಬಳ್ಳಾಪುರದ ಬಳಿ ಇರುವ ಘಾಟಿ ಸುಬ್ರಹ್ಮಣ್ಯದಲ್ಲಿ ಪರಿಚಿತ ಪೂಜಾರಿ ಇದ್ದಾರೆ. ಅವರ ಬಳಿ ಹೋದರೆ ಎಲ್ಲ ತೊಂದರೆಗಳನ್ನು ನಿವಾರಿಸುತ್ತಾರೆ ಎಂದು ನಂಬಿಸಿದ್ದ~ ಎಂದು ಜೆ.ಪಿ.ನಗರ ಇನ್‌ಸ್ಪೆಕ್ಟರ್ ಎಸ್.ಕೆ. ಉಮೇಶ್ `ಪ್ರಜಾವಾಣಿ~ಗೆ ತಿಳಿಸಿದರು.

`ದೊಡ್ಡಬಳ್ಳಾಪುರದ ಬಳಿ ಇರುವ ತನ್ನ ಊರಾದ ಉಜ್ಜನಿಗೆ ಪುಷ್ಪಲತಾ ಅವರನ್ನು ಮೇ 8ರಂದು ಕರೆದುಕೊಂಡು ಹೋಗಿದ್ದ. ಒಂದು ರಾತ್ರಿ ಅವರಿಬ್ಬರೂ ಅಲ್ಲಿ ತಂಗಿ, ಬೆಳಿಗ್ಗೆ 4 ಗಂಟೆ ಸುಮಾರಿಗೆ ಘಾಟಿ ಸುಬ್ರಹ್ಮಣ್ಯಕ್ಕೆ ಕಾಲು ದಾರಿಯಲ್ಲಿ ಕರೆದುಕೊಂಡ ಹೋದ ಆತ ತೋಪಿನಲ್ಲಿ ಪುಷ್ಪಲತಾ ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ಕಲ್ಲಿನಿಂದ ತಲೆಜಜ್ಜಿ ಚಿನ್ನಾಭರಣ ದೋಚಿ ಶವವನ್ನು ಅರೆಬರೆ ಸುಟ್ಟಿದ್ದ~ ಎಂದು ಅವರು ಮಾಹಿತಿ ನೀಡಿದರು.

`ಪತ್ನಿ ಕಾಣೆಯಾದ ಬಗ್ಗೆ ಜನಾರ್ದನ್ ಕೆಂಪೇಗೌಡನಗರ ಪೊಲೀಸರಿಗೆ ದೂರು ಕೊಟ್ಟಿದ್ದರು. ಪುಟ್ಟೇನಹಳ್ಳಿ ಮುಖ್ಯರಸ್ತೆಯಲ್ಲಿ ಸಾರ್ವಜನಿಕರನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಹೇಮಂತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡ~ ಎಂದು ಉಮೇಶ್ ಹೇಳಿದರು.

ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್, ಜಯನಗರ ಉಪ ವಿಭಾಗದ ಎಸಿಪಿ ಜಿ.ಬಿ.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ಭೇದಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.