ADVERTISEMENT

`ಸಾಂಸ್ಕೃತಿಕ ಲೋಕ ಶ್ರೀಮಂತವಾಗಲಿ'

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 20:09 IST
Last Updated 11 ಜುಲೈ 2013, 20:09 IST

ಬೆಂಗಳೂರು: `ಸಿನಿಮಾ ಮತ್ತು ಶಾಸ್ತ್ರೀಯ ಸಂಗೀತ ಸಮ್ಮೀಲನ ಮಾಡುವ ಪ್ರಯತ್ನ ಶ್ಲಾಘನೀಯ. ಈ ಮೂಲಕ ಸಾಂಸ್ಕೃತಿಕ ಲೋಕ ಶ್ರೀಮಂತವಾಗಲಿ' ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ನುಡಿದರು.

ಗುರುವಾರ ನಗರದಲ್ಲಿ ಸಂಗೀತ ರತ್ನ ವಿದ್ಯಾಲಯದ ಆಶ್ರಯದಲ್ಲಿ ನಡೆದ `ಆರ್. ರತ್ನಂ-90 ಹಾಗೂ ಡಾ.ಪಿ.ಬಿ.ಎಸ್. ಒಂದು ಮೆಲುಕು' ಕಾರ್ಯಕ್ರಮದಲ್ಲಿ ಭಕ್ತಿ ಗೀತೆಗಳ ಸಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಅನೇಕ ಸಂಗೀತ ಶಾಲೆಗಳಿದ್ದರೂ ಶಾಸ್ತ್ರೀಯ ಸಂಗೀತಕ್ಕೆ ಮಾತ್ರ ಹೆಚ್ಚು ಸೀಮಿತಗೊಂಡಿವೆ. ಸಿನಿಮಾದಲ್ಲಿ ಶಾಸ್ತ್ರೀಯ ಸಂಗೀತವನ್ನು ಅಳವಡಿಸುವ ಕಾರ್ಯ ಹೆಚ್ಚು ನಡೆಯ ಬೇಕಾಗಿದೆ  ಎಂದರು.

ಸಂಗೀತ ನಿರ್ದೇಶಕ ಆರ್. ರತ್ನಂ ಅವರು ಕಟ್ಟಿಕೊಟ್ಟಿರುವ ಪರಂಪರೆ ದೊಡ್ಡದು. ಅನೇಕ ಪ್ರತಿಭೆಗಳನ್ನು ರತ್ನಂ ಪೋಷಿಸಿ ಬೆಳೆಸಿದ್ದಾರೆ. ರತ್ನಂ ಅವರು ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಸರ್ಕಾರದಿಂದ ರತ್ನಂ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ನುಡಿದರು. ಸುಮಂಗಲಿ ಸೇವಾಶ್ರಮದ ಎಸ್.ಜಿ. ಸುಶೀಲಮ್ಮ, ಡಾ.ಆರ್.ಕೆ. ಪದ್ಮನಾಭ, ಡಾ.ಸಿ. ಸೋಮಶೇಖರ್, ಗಂಡಸಿ ಸದಾನಂದಸ್ವಾಮಿ, ರಂಗಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.