ದೇವನಹಳ್ಳಿ: ಬಯಲು ಸೀಮೆ ವ್ಯಾಪ್ತಿಯಲ್ಲಿರುವ ಆರು ಜಿಲ್ಲೆಯ ರೈತರು ಗುರುವಾರ ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ ರಾಣಿ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಶಾಶ್ವತ ನೀರಾವರಿ ಯೋಜನೆಗೆ ಅಗ್ರಹಿಸಿ ವಿಧಾನ ಸೌಧ ಚಲೋ ಕಾರ್ಯಕ್ರಮದ ಅಂಗವಾಗಿ ರೈತರು ಬೈಕ್ ಜಾಥಾ ಹಮ್ಮಿಕೊಂಡಿದ್ದರು. ಆದರೆ ಜಾಥಾ ಬೆಂಗಳೂರು ನಗರ ಪ್ರವೇಶಿಸಲು ಪೊಲೀಸರು ಅವಕಾಶ ನೀಡಲಿಲ್ಲ. ರಾಣಿ ವೃತ್ತದಲ್ಲಿ ಸೇರ್ಪಡೆಗೂಂಡು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ‘ನಡೆದಂತೆ ನುಡಿದಿದ್ದೇವೆ ಎಂದು ಸರ್ಕಾರ ಪ್ರತಿನಿತ್ಯ ಪುಟಗಟ್ಟಲೆ ಜಾಹೀರಾತು ನೀಡುತ್ತಲೇ ಇದೆ, ಸರ್ಕಾರ ಆರಂಭದಲ್ಲಿ ನೀಡಿದ್ದ ಭರವಸೆಗಳು ಈಡೇರಿಲ್ಲ’ ಎಂದರು.
ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್ ಹರೀಶ್ ಮಾತನಾಡಿದರು.
ರೈತ ಸಂಘ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ಸತತ ಹೋರಾಟ ನಡೆಸಿದ್ದರೂ ಅಂತಿಮವಾಗಿ ಅವೈಜ್ಞಾನಿಕ ಎತ್ತಿನ ಹೊಳೆ ಯೋಜನೆಗೆ ಶಂಕುಸ್ಥಾಪನೆ ಮಾಡಲಾಯಿತು. ಬಯಲು ಪ್ರದೇಶದಲ್ಲಿರುವ ಸಾವಿರಾರು ಕೆರೆಗಳು ದುರಸ್ತಿಯಾಗಿಲ್ಲ, ಹೂಳು ತೆಗೆದಿಲ್ಲ, ಬರಿ ಕಣ್ಣೋರೆಸುವ ತಂತ್ರಗಾರಿಕೆ ಅಷ್ಟೇ. ತುಮಕೂರಿಗೆ ಬರುವ ಹೇಮಾವತಿ ನೀರನ್ನು ಗೊರೂರು ಅಣೆಕಟ್ಟು ಮೂಲಕ ಕಬಿನಿ ಕೆ.ಆರ್.ಎಸ್ಗೆ ಹರಿಸಿ ತಮಿಳುನಾಡಿಗೆ ಬಿಡುತ್ತಿದ್ದಾರೆ ಇದೆಂತಹ ಸರ್ಕಾರ ನೀತಿ ಎಂದು ದೂರಿದರು.
ನಂತರ ಬಂದ ಸಚಿವ ಕೃಷ್ಣ ಬೈರೇಗೌಡ ಬೇಡಿಕೆ ಅಲಿಸಿದರು. ಎತ್ತಿನ ಹೊಳೆ ಯೋಜನೆ ಕಾಮಗಾರಿ ಭರದಿಂದ ಸಾಗುತ್ತಿದೆ. ಜತೆಗೆ ಹೆಬ್ಬಾಳ ಕೆರೆಯಿಂದ 1400 ಕೋಟಿ ತ್ಯಾಜ್ಯ ನೀರು ಸಂಸ್ಕರಿಸಿ ಪೈಪ್ ಲೈನ್ ಮೂಲಕ ಬಯಲು ಸೀಮೆ ಕೆರೆಗಳಿಗೆ ಪೂರೈಕೆ ಮಾಡಲು ಯೋಜನೆ ರೂಪಿತವಾಗಿದೆ ಎಂದರು.
ಸಚಿವರ ಮಾತಿನಿಂದ ಸಮಾಧಾನಗೊಳ್ಳದ ರೈತರು ಬೆಂಗಳೂರು ನಗರದ ಕಡೆ ತೆರಳಲು ಬ್ಯಾರಿಕೇಡ್ ಬಳಿ ತೆರಳಿದರು. ಆಗ ರಾಜ್ಯ ಘಟಕದ ಅಧ್ಯಕ್ಷ ಸೇರಿ ಎಲ್ಲರನ್ನು ಪೊಲೀಸರು ಬಂಧಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.