ADVERTISEMENT

ಸಿಇಟಿ ಘಟಕದ ಗುಮಾಸ್ತ ವಿಧಾನಸೌಧದಲ್ಲಿ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 20:07 IST
Last Updated 15 ಜುಲೈ 2013, 20:07 IST
ವಿಧಾನಸೌಧದಲ್ಲಿ ಸೋಮವಾರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡ ಮಲ್ಲೇಶ್ವರ ಸಿಇಟಿ ಘಟಕದ ದ್ವಿತೀಯ ದರ್ಜೆ ಗುಮಾಸ್ತ ಆನಂದ್ ಕುಮಾರ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತು 	-ಪ್ರಜಾವಾಣಿ ಚಿತ್ರ
ವಿಧಾನಸೌಧದಲ್ಲಿ ಸೋಮವಾರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡ ಮಲ್ಲೇಶ್ವರ ಸಿಇಟಿ ಘಟಕದ ದ್ವಿತೀಯ ದರ್ಜೆ ಗುಮಾಸ್ತ ಆನಂದ್ ಕುಮಾರ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಮಲ್ಲೇಶ್ವರ ಸಿಇಟಿ ಘಟಕದ ದ್ವಿತೀಯ ದರ್ಜೆ ಗುಮಾಸ್ತ ಆನಂದ್ ಕುಮಾರ್ ಎಂಬವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಧಾನಸೌಧದ ಮೂರನೇ ಮಹಡಿಯ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರ ಕಚೇರಿಯಲ್ಲಿ ಸೋಮವಾರ ನಡೆದಿದೆ.

ವೈಟ್‌ಫೀಲ್ಡ್ ನಿವಾಸಿ ಆನಂದ್ ಕುಮಾರ್, ಸೋಮವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ದೇಶಪಾಂಡೆ ಅವರ ಕಚೇರಿಗೆ ಬಂದು, `ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ಸಿಇಟಿ ಘಟಕದ ಆಡಳಿತಾಧಿಕಾರಿ ಕುಲಕರ್ಣಿ ಎಂಬುವರು ಜಾತಿ ನಿಂದನೆ ಮಾಡಿದ್ದಾರೆ. ಕುಲಕರ್ಣಿ ಅವರ ಕಿರುಕುಳ ಹೆಚ್ಚಾಗಿದೆ. ಈ ಬಗ್ಗೆ ನ್ಯಾಯ ಒದಗಿಸಿ' ಎಂಬ ಮನವಿ ಪತ್ರ ನೀಡಿದ್ದಾರೆ. ಮನವಿ ಪತ್ರ ನೀಡಿದ ತಕ್ಷಣ ಅವರು ಜೇಬಿನಿಂದ ವಿಷ ತೆಗೆದು ಕುಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಷ ಕುಡಿದು ಅಸ್ವಸ್ಥರಾದ ಅವರನ್ನು ಕೂಡಲೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

`ಕುಲಕರ್ಣಿ ಅವರ ಕಿರುಕುಳ ಹೆಚ್ಚಾಗಿತ್ತು. ನಾಲ್ಕು ತಿಂಗಳಿಂದ ವೇತನ ಹಾಗೂ ರಜೆ ನೀಡದೇ ತೊಂದರೆ ನೀಡುತ್ತಿದ್ದರು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಹೀಗಾಗಿ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರ ಕಚೇರಿಗೆ ಮನವಿ ಪತ್ರ ಸಲ್ಲಿಸಿದೆ. ಆ ನಂತರವೂ ನ್ಯಾಯ ಸಿಗುವ ವಿಶ್ವಾಸ ಮೂಡಲಿಲ್ಲ. ಹೀಗಾಗಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದೆ' ಎಂದು ಆನಂದ್ ಕುಮಾರ್ ಹೇಳಿಕೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವಿಧಾನಸೌಧ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.