ADVERTISEMENT

ಸಿಬಿಐ ತನಿಖೆಗೆ ಸಚಿವ ಜೈನ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 19:06 IST
Last Updated 18 ಸೆಪ್ಟೆಂಬರ್ 2013, 19:06 IST

ಬೆಂಗಳೂರು: ಮೂಡುಬಿದಿರೆಯ ಜೈನ ಬಸದಿಯಲ್ಲಿ ನಡೆದಿ­ರುವ ವಿಗ್ರಹ ಕಳವು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರನ್ನು ಒತ್ತಾಯಿ­ಸುವುದಾಗಿ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್‌ ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಈ ಪ್ರಕರಣವು ಅಂತರ­ರಾಜ್ಯ ವ್ಯಾಪ್ತಿ ಹೊಂದಿರುವುದರಿಂದ ಸಿಬಿಐ ತನಿಖೆಗೆ ಒಪ್ಪಿಸುವುದು ಸೂಕ್ತ ಎಂದು ಛತ್ತೀಸಗಡದ ಪೊಲೀಸ್‌ ಮಹಾ­ನಿರ್ದೇಶ­ಕರು ಇತ್ತೀಚೆಗೆ ರಾಜ್ಯದ ಪೊಲೀಸ್‌ ಮಹಾನಿರ್ದೇಶಕ­ರಿಗೆ ಪತ್ರ ಬರೆದಿದ್ದಾರೆ. ಅದನ್ನು ಆಧರಿಸಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಒತ್ತಾಯಿಸು­ತ್ತೇನೆ’ ಎಂದರು.

‘ಬಸದಿ ಕಳ್ಳತನ ಮಾಡಿದ ವಿಗ್ರಹ­ಗಳನ್ನು ಛತ್ತೀಸಗಡದ ಆಭರಣ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿ­ರುವುದಾಗಿ ಆರೋಪಿ ವಿಚಾರಣೆ ವೇಳೆ ತಿಳಿಸಿದ್ದಾನೆ. ಖರೀದಿ ಮಾಡಿರುವಾತ ಪ್ರಭಾವಿ ವ್ಯಕ್ತಿ. ಛತ್ತೀಸಗಡ ಸರ್ಕಾರ ಕೂಡ ತನಿಖೆಗೆ ಸಹಕರಿಸುತ್ತಿಲ್ಲ. ಆದ್ದರಿಂದ ಪ್ರಕರಣದ ತನಿಖೆಯನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಖರೀದಿದಾರ ತನ್ನ ವಿರುದ್ಧದ ಆರೋಪ­ಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಛತ್ತೀಸಗಡ ಡಿಜಿಪಿ ತಿಳಿಸಿ­ದ್ದಾರೆ. ಕೆಲವು ವಿಗ್ರಹಗಳನ್ನು ಆಂಧ್ರ ಮತ್ತು ಒಡಿಶಾದಲ್ಲಿ ಮಾರಾಟ ಮಾಡಿ­ರುವ ಶಂಕೆಯೂ ಇದೆ. ಆದ್ದರಿಂದ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದೇ ಸೂಕ್ತ ಎಂದರು.

‘ಈ ಘಟನೆಯಿಂದ ಇಡೀ ಜೈನ ಸಮು­ದಾಯಕ್ಕೆ ನೋವಾಗಿದೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಸಮುದಾಯದ ಪರವಾಗಿ ನಾನು ಒತ್ತಾಯಿಸುತ್ತೇನೆ’ ಎಂದು ಹೇಳಿದರು.

ಸಿಬಿಐ ತನಿಖೆ ನಡೆಸುವ ಸಂಬಂಧ ಗೃಹ ಸಚಿವ ಕೆ.ಜೆ.ಜಾರ್ಜ್‌ ಮತ್ತು ಕಾನೂನು ಸಚಿವ ಟಿ.ವಬಿ.ಜಯಚಂದ್ರ ಅವರಿಗೆ ಈಗಾಗಲೇ ಪ್ರತ್ಯೇಕ ಪತ್ರಗಳನ್ನು ಬರೆದಿರುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.