ಬೆಂಗಳೂರು: ನಂದಿನಿ ಲೇಔಟ್ ಬಳಿಯ ರಾಜೀವ್ಗಾಂಧಿ ನಗರದ ಮನೆಯೊಂದರಲ್ಲಿ ಸೋಮವಾರ ಸಿಲಿಂಡರ್ ಬದಲಿಸುವ ವೇಳೆ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ.
ಘಟನೆಯಲ್ಲಿ ಮಹಾಲಕ್ಷ್ಮಿ (45) ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.
‘ಏಳು ವರ್ಷದ ಮಗಳ ಜತೆ ವಾಸವಿದ್ದ ಮಹಾಲಕ್ಷ್ಮಿ, ಟೀ ಮಾಡಲೆಂದು ಬೆಳಿಗ್ಗೆ ಅಡುಗೆ ಕೋಣೆಗೆ ಹೋಗಿದ್ದರು. ಸಿಲಿಂಡರ್ನಲ್ಲಿದ್ದ ಅನಿಲ ಖಾಲಿ ಆಗಿದ್ದರಿಂದ, ಅದನ್ನು ಬದಲಿಸಲು ಮುಂದಾಗಿದ್ದರು. ಹೊಸ ಸಿಲಿಂಡರ್ ಮುಚ್ಚಳ ತೆಗೆಯುತ್ತಿದ್ದಂತೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಕೆಲ ಕ್ಷಣಗಳಲ್ಲೇ ಬೆಂಕಿ ಇಡೀ ಅಡುಗೆ ಕೋಣೆಯನ್ನು ಆವರಿಸಿತ್ತು’ ಎಂದು ಸ್ಥಳೀಯರೊಬ್ಬರು ತಿಳಿಸಿದರು.
‘ಮಹಿಳೆಯ ಚೀರಾಟ ಕೇಳಿ ಒಳ ಹೋದಾಗ ಅಳುತ್ತ ಕುಳಿತಿದ್ದ ಬಾಲಕಿಯನ್ನು ರಕ್ಷಿಸಿ ಹೊರಗೆ ಕರೆತರಲಾಯಿತು. ಅಡುಗೆ ಕೋಣೆಯ ಬಾಗಿಲಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಮನೆಯ ಚಾವಣಿ ಮುರಿದು ಅಡುಗೆ ಕೋಣೆಗೆ ಹೋಗಿ ಮಹಾಲಕ್ಷ್ಮಿ ಅವರನ್ನು ಹೊರಗೆ ಕರೆತಂದರು’ ಎಂದರು.
ಘಟನೆ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.