ADVERTISEMENT

ಸ್ವಚ್ಛತೆಯಲ್ಲಿಯೇ ದೇವರಿದ್ದಾನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ನೆಲಮಂಗಲ:  `ಸ್ವಚ್ಛತೆಯಲ್ಲಿಯೇ ದೇವರಿದ್ದಾನೆ, ಗ್ರಾಮದ ನೈರ್ಮಲ್ಯ ಕಾಪಾಡಲು ಶೌಚಾಲಯಗಳನ್ನು ಬಳಸಬೇಕು~ ಎಂದು ಶಾಸಕ ಎಂ.ವಿ.ನಾಗರಾಜು ಕರೆ ನೀಡಿದರು.

ಸ್ಥಳೀಯ ತಾಲ್ಲೂಕು ಪಂಚಾಯತಿ ತಾಲ್ಲೂಕಿನ ಶ್ರೀನಿವಾಸಪುರ ಗ್ರಾಮ ಪಂಚಾಯತಿ ಸಹಯೋಗದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಸ್ವಚ್ಛತಾ ಉತ್ಸವ ಹಾಗು ನೈರ್ಮಲ್ಯ ಪ್ರಶಸ್ತಿ ಪ್ರಧಾನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ನೆಲಮಂಗಲ ಪಟ್ಟಣಕ್ಕೆ ಶೀಘ್ರವಾಗಿ ಒಳಚರಂಡಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.

  ವಿಧಾನಪರಿಷತ್ ಸದಸ್ಯ ಇ.ಕೃಷ್ಣಪ್ಪ ಅರಿಶಿನಕುಂಟೆ ಗ್ರಾಮ ಪಂಚಾಯತಿಗೆ ರಜತ ನೈರ್ಮಲ್ಯ ಪ್ರಶಸ್ತಿಯನ್ನು ಮತ್ತು ರೂ.4.5ಲಕ್ಷ ಸಹಾಯಧನದ ಚೆಕ್ ಅನ್ನು ತಾ.ಪಂ.ಅಧ್ಯಕ್ಷ ಕೆ.ಎಂ.ಲಕ್ಷ್ಮೀನಾರಾಯಣ ಅವರಿಗೆ ನೀಡಿದರು.

ವಾಜರಹಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ನೈರ್ಮಲ್ಯ ಶಾಲಾ ಪ್ರಶಸ್ತಿಯನ್ನು ರೂ. 20 ಸಾವಿರ ನಗದು ಜತೆ ನೀಡಲಾಯಿತು.

ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ.ಸದಸ್ಯ ಎಂ.ಎನ್.ರಾಮ್, ತಾ.ಪಂ.ಉಪಾಧ್ಯಕ್ಷೆ ಅಶ್ವತ್ಥಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಮಂಜುನಾಥ್, ಕಾರ್ಯನಿರ್ವಾಹಾಧಿಕಾರಿ ಡಾ.ಎಂ.ಅಶ್ವತ್ಥಪ್ಪ, ಅಭಿವೃದ್ಧಿ ಅಧಿಕಾರಿ ಎಲ್.ಮೋಹನ್‌ಕುಮಾರ್, ಡಿ.ಎಂ.ಪದ್ಮನಾಭ, ಆರ್.ನಟರಾಜ್, ಮುಖ್ಯಶಿಕ್ಷಕಿ ಡಿ.ಸೌಭಾಗ್ಯ, ಸದಸ್ಯರಾದ ರಾಮಸ್ವಾಮಿ, ರಂಗಸ್ವಾಮಿ, ಕೆಂಪರಾಜು, ಆಂಜನಮೂರ್ತಿ ಮುಂತಾದವರು ಭಾಗಿಗಳಾಗಿದ್ದರು.

ಯಂಟಗಾನಹಳ್ಳಿ ವರದಿ: ಸಂಪೂರ್ಣ ಸ್ವಚ್ಛತಾ ಆಂದೋಲನದಡಿಯಲ್ಲಿ ಗಾಂಧಿ ಜಯಂತಿಯನ್ನು ಸ್ವಚ್ಛತಾ ಉತ್ಸವವಾಗಿ ಆಚರಿಸಲಾಯಿತು.

ಒಂದು ತಿಂಗಳು ನಡೆಯುವ ಉತ್ಸವದ ಮಾಸಾಚರಣೆ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಜಾಥಾಕ್ಕೆ ಗ್ರಾ.ಪಂ.ಅಧ್ಯಕ್ಷ ಧನಲಕ್ಷ್ಮೀ ಚಾಲನೆ ನೀಡಿದರು.

 ರಾಷ್ಟ್ರೀಯ ಸೇವಾ ಯೋಜನೆ ಮತ್ತು ರಾಷ್ಟ್ರೀಯ ಹಸಿರು ಪಡೆ ವತಿಯಿಂದ ಶ್ರಮದಾನ ನಡೆಸಲಾಯಿತು. ಎಸ್.ಎಸ್.ಬಿರಾದರ್ ಮಾರ್ಗದರ್ಶನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಯೋಜನಾಧಿಕಾರಿ ಬಿ.ಮಧುಸೂದನ್ ಮಾತನಾಡಿದರು. ಮುಖ್ಯಶಿಕ್ಷಕ ಡಿ.ಶ್ರೀನಿವಾಸಯ್ಯ, ಕೆ.ಜಿ.ಭೀಮರಾಜು, ವಿಶ್ರಾಂತ ಶಿಕ್ಷಕ ಗೋಪಾಲಯ್ಯ ವೇದಿಕೆಯಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.