ADVERTISEMENT

ಸ್ವಯಂಕೃಷಿ ಸಂಸ್ಥೆಯ ವಂಚನೆ ಪ್ರಕರಣ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 19:30 IST
Last Updated 6 ಜುಲೈ 2012, 19:30 IST
ಸ್ವಯಂಕೃಷಿ ಸಂಸ್ಥೆಯ ವಂಚನೆ ಪ್ರಕರಣ: ಐವರ ಬಂಧನ
ಸ್ವಯಂಕೃಷಿ ಸಂಸ್ಥೆಯ ವಂಚನೆ ಪ್ರಕರಣ: ಐವರ ಬಂಧನ   

ದೇವನಹಳ್ಳಿ: ಸ್ವಯಂಕೃಷಿ ಸಂಸ್ಥೆಯ ಅಧ್ಯಕ್ಷ ಮುರಳಿ, ಉಪಾಧ್ಯಕ್ಷ ಮತ್ತು ಕಾರ್ಯ ನಿರ್ವಹಣಾಧಿಕಾರಿ ವೀರೇಂದ್ರಬಾಬು ಹಾಗೂ ನಿರ್ದೇಶಕರಾದ ವೆಂಕಟೇಶಬಾಬು, ಮಾರೇಗೌಡ ಮತ್ತು ಗೋವಿಂದರಾಜ್ ಅವರನ್ನು ಶುಕ್ರವಾರ ಸ್ಥಳೀಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ವೀರೇಂದ್ರ ಬಾಬು ಹಾಗೂ ಮುರಳಿಯನ್ನು ಹೆಚ್ಚಿನ ತನಿಖೆಗಾಗಿ ಜುಲೈ 12ರವರೆಗೆ ಪೊಲೀಸರು ವಶಕ್ಕೆ ನೀಡಲಾಗಿದ್ದು ಇತರೆ ಮೂವರು ನಿರ್ದೇಶಕರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಲಯ ಆದೇಶಿಸಿದೆ.

ತಾಲ್ಲೂಕು ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಸ್ವಯಂಕೃಷಿ ಚಿಟ್‌ಫಂಡ್ಸ್ ಶಾಖೆಗಳ ಮೂಲಕ ಸಾರ್ವಜನಿಕರನ್ನು ವಂಚಿಸಿದ ಆರೋಪದ ಮೇಲೆ ಈ ಐವರ ವಿರುದ್ಧ 10ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿದ್ದವು. ತಲೆಮರೆಸಿಕೊಂಡು ಹೈದರಾಬಾದಿನಲ್ಲಿ ಇದ್ದ ಇವರನ್ನು ದೇವನಹಳ್ಳಿ ಪೊಲೀಸರು ಗುರುವಾರ ಬಂಧಿಸಿ ಇಲ್ಲಿಗೆ ಕರೆತಂದಿದ್ದರು.

ಸ್ವಯಂಕೃಷಿ ಸಂಸ್ಥೆಗೆ ಏಜೆಂಟರಾಗಿದ್ದವರು ಹಾಗೂ ಗ್ರಾಹಕರು ಹೂಡಿಕೆ ಮಾಡಿದ್ದ ಹಣವನ್ನು ಹಿಂದಿರುಗಿಸುವಲ್ಲಿ ಸಂಸ್ಥೆಯು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಸಂಸ್ಥೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹಾಗೂ ನಿರ್ದೇಶಕರ ವಿರುದ್ಧ ಕಳೆದ ತಿಂಗಳಿನಿಂದ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಪ್ರಕರಣ ದಾಖಲಾಗಿರುವ ಸ್ಥಳಗಳು: ದೇವನಹಳ್ಳಿ, ಮೈಸೂರು, ನಂಜನಗೂಡು, ಬೆಂಗಳೂರಿನ ಜಯನಗರ, ದೊಡ್ಡಬಳ್ಳಾಪುರ, ಚಿಂತಾಮಣಿ, ಕೋಲಾರಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ ಆದರೆ ವಂಚನೆ ಪ್ರಕರಣ ದಾಖಲಾಗಿರುವುದು ಚಿಟ್‌ಫಂಡ್‌ನಲ್ಲಿ ಎಂಬುದು ವಿಶೇಷ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.