ADVERTISEMENT

ಹಣ ಹೂಡಿಕೆಯಿಂದ ದೀರ್ಘಾವಧಿ ಲಾಭ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 19:30 IST
Last Updated 19 ಜುಲೈ 2012, 19:30 IST

ಬೆಂಗಳೂರು: `ಮ್ಯೂಚುಯಲ್ ಫಂಡ್‌ನಲ್ಲಿ ಹಣ ತೊಡಗಿಸುವುದಕ್ಕಿಂತಲೂ, ಅಂಚೆ ಕಚೇರಿಗಳಲ್ಲಿರುವ ವಿವಿಧ ಉಳಿತಾಯ ಯೋಜನೆಯಡಿ ಹಣ ಹೂಡುವುದರಿಂದ ದೀರ್ಘಾವಧಿ ಲಾಭ ಪಡೆಯಬಹುದು~ ಎಂದು ರಾಷ್ಟ್ರೀಯ ಉಳಿತಾಯ ಸಂಸ್ಥೆಯ ನಿರ್ದೇಶಕ ಅನಿಲ್ ಭಟ್ಟಾಚಾರ್ಯ ಸಲಹೆ ನೀಡಿದರು.

ರಾಷ್ಟ್ರೀಯ ಉಳಿತಾಯ ಸಂಸ್ಥೆಯು ನಗರದಲ್ಲಿ ಗುರುವಾರ ಆಯೋಜಿಸಿದ್ದ `ಸಂಬಳದಲ್ಲಿ ಉಳಿತಾಯ~ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಷೇರು ಮಾರುಕಟ್ಟೆಯ ವಿಚಾರದಲ್ಲಿ ಎಷ್ಟೇ ಪಳಗಿದರೂ, ಹಣ ಪಡೆಯುವ ಮತ್ತು ಕಳೆದುಕೊಳ್ಳವ ಬಗ್ಗೆ ಯಾರಿಗೂ ನಿಖರವಾದ ಮಾಹಿತಿ ಇರುವುದಿಲ್ಲ. ಎಷ್ಟೇ ಲೆಕ್ಕಚಾರ ಹಾಕಿ ಹಣ ಹೂಡಿದರೂ ಲಾಭಕ್ಕಿಂತ ನಷ್ಟವೇ ಸಂಭವಿಸುತ್ತದೆ. ಹಾಗಾಗಿ ಅಂಚೆ ಕಚೇರಿಯಲ್ಲಿ ದೊರೆಯುವ ಉಳಿತಾಯ ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ಪಡೆದುಕೊಂಡು ಆದಾಯಕ್ಕೆ ಅನುಗುಣವಾಗಿ ಹಣ ಉಳಿತಾಯ ಮಾಡಬಹುದು~ ಎಂದರು.

`ಕುಟುಂಬದಲ್ಲಿ ಮಹಿಳೆಯರು ಪ್ರಮುಖವಾಗಿ ಸಣ್ಣ ಉಳಿತಾಯದ ಕೇಂದ್ರಗಳಿದ್ದಂತೆ. ಸರ್ಕಾರದಿಂದ ಮಾನ್ಯತೆ ಪಡೆದಿರುವ ಬ್ಯಾಂಕುಗಳಲ್ಲಿ ಉಳಿತಾಯ ಮಾಡುವ ಬಗ್ಗೆ ಮಹಿಳೆಯರಿಗೆ ಹೆಚ್ಚಿನ ಮಾಹಿತಿ ನೀಡುವ ಮೂಲಕ ಸದೃಢ ಆರ್ಥಿಕ ವ್ಯವಸ್ಥೆಯನ್ನು ರೂಪಿಸಬಹುದು~ ಎಂದು ಹೇಳಿದರು.

`ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಾಗಿ ಮ್ಯೂಚುಯಲ್ ಫಂಡ್ ಮತ್ತು ಷೇರು ಮಾರುಕಟ್ಟೆಯಲ್ಲಿ ಹಣ ಹೂಡುತ್ತಾರೆ. ವಿಪರೀತ ದುಂದುವೆಚ್ಚ ಮತ್ತು ಭದ್ರತೆಯಿಲ್ಲದೇ ಉಳಿತಾಯ ಯೋಜನೆಗಳಿಂದ ಆ ಜನರ ಮೇಲೆ ಆರ್ಥಿಕ ಹಿಂಜರಿತದಂಹ ಸಮಸ್ಯೆಗಳು ಪ್ರತಿಕೂಲ ಪರಿಣಾಮ ಬೀರುತ್ತದೆ. ಆದರೆ ದೇಶದಲ್ಲಿ ಬ್ಯಾಂಕ್‌ಗಳ ಉಳಿತಾಯ ಯೋಜನೆಗಳು ಆರ್ಥಿಕ ಹಿಂಜರಿತವಾಗದಂತೆ ತಡೆಯುತ್ತಿದೆ~ ಎಂದರು.

ಬೆಂಗಳೂರು ದಕ್ಷಿಣ ವಿಭಾಗೀಯ ಅಂಚೆ ಕಚೇರಿಯ ಹಿರಿಯ ಸೂಪರಿಂಟೆಂಡೆಂಟ್ ವಿ.ಕೆ.ಮೋಹನ್, `ಪ್ರತಿ ತಿಂಗಳ ಆದಾಯದಲ್ಲಿ ಎಷ್ಟು ಪ್ರಮಾಣದಲ್ಲಿ ಹಣವನ್ನು ಉಳಿತಾಯ ಮಾಡಬೇಕು ಎಂಬುದರ ಬಗ್ಗೆ ಖಾತ್ರಿ ಪಡಿಸಿಕೊಂಡು, ನಂತರ ಸಾಧ್ಯವಾದಷ್ಟು ಭದ್ರತೆಯಿರುವ ಉಳಿತಾಯ ಯೋಜನೆಗಳಲ್ಲಿ ಹಣ ತೊಡಗಿಸಿ~ ಎಂದು ಹೇಳಿದರು.
 ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ಬಿ.ರಾಜುಬಾಬು,  ಸಹಾಯಕ ನಿರ್ದೇಶಕ ಜಿ.ವಿ.ಜೋರಾಪುರ್, ಭೌಗೋಳಿಕ ದತ್ತಾಂಶ ಕೇಂದ್ರದ ನಿರ್ದೇಶಕ ಪಿ.ವಿ.ರಾಜಶೇಖರ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.