ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಭಾನುವಾರ ಪ್ರಯಾಣಿಕರ ದಟ್ಟಣೆ ದುಪ್ಪಟ್ಟಾಗಿತ್ತು.
ಹಬ್ಬದ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ವಿವಿಧ ಪ್ರೇಕ್ಷಣಿಯ ಹಾಗೂ ಧಾರ್ಮಿಕ ಸ್ಥಳಗಳಿಗೆ ಕೆಎಸ್ಆರ್ಟಿಸಿ ಹೆಚ್ಚುವರಿಯಾಗಿ ಬಸ್ ಸೇವೆ ಕಲ್ಪಿಸಿತ್ತು. ಆದರೂ, ದಸರಾ ರಜಾ ಕಾರಣದಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾದ ಕಾರಣ ಸಾಕಷ್ಟು ಮಂದಿಗೆ ಬಸ್ನಲ್ಲಿ ಟಿಕೆಟ್ ಸಿಕ್ಕಿರಲಿಲ್ಲ. ತಡರಾತ್ರಿ ವರೆಗೂ ಬಸ್ನಲ್ಲಿ ಸೀಟು ಸಿಗುತ್ತದೆಯೋ ಎಂದು ಪ್ರಶ್ನಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಈ ನಡುವೆ, ಖಾಸಗಿ ಬಸ್ಗಳಿಗೂ ಸುಗ್ಗಿ. ಮಾಮೂಲಿಗಿಂತ ಅಧಿಕ ದರಕ್ಕೆ ಖಾಸಗಿ ಬಸ್ಗಳು ಪ್ರಯಾಣಿಕರನ್ನು ಕರೆದುಕೊಂಡು ಹೋದವು. ಮಾಮೂಲಿಗಿಂತ ಅಧಿಕ ಸಂಖ್ಯೆಯಲ್ಲಿ ವಾಹನಗಳು ಸಂಚರಿಸಿದರೂ ರಜಾದಿನವಾದ ಕಾರಣ ನಗರದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಇರಲಿಲ್ಲ.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ನೂಕುನುಗ್ಗಲು ಕಂಡು ಬಂತು. ರೈಲಿನಲ್ಲಿಯೂ ಮಿತಿಮೀರಿದ ಪ್ರಯಾಣಿಕರಿದ್ದರಿಂದ ಮಕ್ಕಳು ಮಹಿಳೆಯರೂ ಸೇರಿದಂತೆ ಹಿರಿಯ ನಾಗರಿಕರು ತೀವ್ರ ತೊಂದರೆ ಅನುಭವಿಸಿದರು.
ನಗರದಲ್ಲಿ ಶನಿವಾರ ಸಂಚಾರದಟ್ಟಣೆ ಕಾರಣದಿಂದ ಪ್ರಯಾಣಿಕರು ಗಂಟೆಗಟ್ಟಲೆ ಪರದಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.