ಬೆಂಗಳೂರು: ‘ಹಳ್ಳಿಯ ಅನುಭವಗಳಿಂದಾಗಿಯೇ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿಯಂತಹ ಯೋಜನೆಗಳನ್ನು ರೂಪಿಸಲು ಸಾಧ್ಯವಾಯಿತು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪಲ್ಲವ ಪ್ರಕಾಶನ ಮತ್ತು ಮಧುಚೇತನ ಪ್ರಕಾಶನದ ಸಹಯೋಗದಲ್ಲಿ ಬುಧವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾಜದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಮೌಢ್ಯವನ್ನು ಸದಾ ಜೀವಂತವಾಗಿ ಇಟ್ಟಿರುತ್ತಾರೆ. ಹಾಗಾಗಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇರಬೇಕು’ ಎಂದು ಹೇಳಿದರು.
ದೆಹಲಿ ಜೆಎನ್ಯು ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಡಾ. ಪುರುಷೋತ್ತಮ ಬಿಳಿಮಲೆ, ‘ಕಾ.ತ.ಚಿಕ್ಕಣ್ಣ ಅವರ ಕೃತಿಗಳು ಮೌಲಿಕವಾಗಿವೆ. ಕನ್ನಡ ಸಾಹಿತ್ಯ ಓದುಗರಿಗೆ ಹೊಸ ಹೊಳವು ನೀಡುತ್ತವೆ. ಇಂದಿನ ತಲೆಮಾರಿನ ಸಾಹಿತ್ಯಾಸಕ್ತರ ಬೌದ್ಧಿಕ ನೆಲೆಗಟ್ಟಿನ ವಿಸ್ತರಣೆಗೆ ಪೂರಕ’ ಎಂದು ವಿಮರ್ಶಿಸಿದರು.
ಕೃತಿಗಳ ಬಿಡುಗಡೆ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ ಕಾ.ತ. ಚಿಕ್ಕಣ್ಣ ಅವರ ಕೃತಿಗಳಾದ ‘ಮೆಕ್ಕಲು’, ‘ವಾರೆನೋಟ’, ‘ಕಾ.ತ. ಚಿಕ್ಕಣ್ಣನವರ ಜೀವನ ಮತ್ತು ಸಾಹಿತ್ಯ’, ‘ಕಾ.ತ.ಚಿಕ್ಕಣ್ಣನವರ ಕಥನ ವಿನ್ಯಾಸ’, ‘ಮುಂಜಾವು–ಒಂದು ಅಧ್ಯಯನ’, ‘ಕಾ.ತ. ಚಿಕ್ಕಣ್ಣನಗರ ಸಾಹಿತ್ಯದಲ್ಲಿ ಗ್ರಾಮೀಣ ಸಂವೇದನೆ’ ಕೃತಿಗಳು ಲೋಕಾರ್ಪಣೆಗೊಂಡವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.