ಬೆಂಗಳೂರು: ಕುಡಿಯುವ ನೀರು ಕೇಳುವ ನೆಪದಲ್ಲಿ ಹಾಡಹಗಲೇ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಕುಟುಂಬ ಸದಸ್ಯರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಸುಮಾರು 2.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ ಘಟನೆ ಕೆ.ಆರ್.ಪುರ ಸಮೀಪದ ವಿನಾಯಕನಗರದಲ್ಲಿ ಮಂಗಳವಾರ ನಡೆದಿದೆ.ವಿನಾಯಕನಗರ ನಿವಾಸಿ ರವಿಕುಮಾರ್ ಎಂಬುವರ ಮನೆಯಲ್ಲಿ ದರೋಡೆ ನಡೆದಿದ್ದು, ಈ ಸಂಬಂಧ ಅವರ ಪತ್ನಿ ರಾಧಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಕ್ರಷರ್ ಇಟ್ಟುಕೊಂಡಿರುವ ರವಿಕುಮಾರ್ ಅವರು ದೇವಸಂದ್ರ ಮುಖ್ಯರಸ್ತೆಯಲ್ಲಿ ಕಚೇರಿ ಹೊಂದಿದ್ದಾರೆ. ಪ್ರತಿನಿತ್ಯದಂತೆ ಅವರು ಬೆಳಿಗ್ಗೆ 10 ಗಂಟೆಗೆ ಕಚೇರಿಗೆ ಹೋಗಿದ್ದರು. ಅವರ ಪತ್ನಿ ರಾಧಾ, ಮಗ ಅಖಿಲ್ (14) ಮತ್ತು ಮಗಳು ಹಿಮಶ್ರೀ (10) ಮಾತ್ರ ಮನೆಯಲ್ಲಿದ್ದರು. ಕುಡಿಯುವ ನೀರು ಕೇಳುವ ನೆಪದಲ್ಲಿ ಮಾತು ಆರಂಭಿಸಿದ ದುಷ್ಕರ್ಮಿಗಳು ಏಕಾಏಕಿ ಹಿಮಶ್ರೀಯ ಕುತ್ತಿಗೆಗೆ ಚಾಕು ಹಿಡಿದು ಮನೆಯೊಳಗೆ ಎಳೆದೊಯ್ದರು. ಬಳಿಕ ಆಕೆಯ ತಾಯಿ ಮತ್ತು ಸಹೋದರನಿಗೆ ಮಾರಕಾಸ್ತ್ರಗಳನ್ನು ತೋರಿಸಿ ಹಣ ಹಾಗೂ ಚಿನ್ನಾಭರಣ ನೀಡುವಂತೆ ಬೆದರಿಸಿದರು.
ಇದರಿಂದ ಆತಂಕಗೊಂಡ ರಾಧಾ ಅವರು ಆಭರಣಗಳನ್ನು ಬಿಚ್ಚಿ ಕೊಟ್ಟಿದ್ದಾರೆ. ದರೋಡೆಕೋರರು 125 ಗ್ರಾಂ ತೂಕದ ಆಭರಣಗಳನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.