ಬೆಂಗಳೂರು: `ಕೇಂದ್ರೀಯ ಶಾಲೆಗಳಲ್ಲಿ ಬೋಧಿಸುವ ಕನ್ನಡ ಪ್ರಾಧ್ಯಾಪಕರು ರಾಜ್ಯದಲ್ಲಿರುವ ಐತಿಹಾಸಿಕ ಸ್ಥಳಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು. ಆ ಮೂಲಕ ಜ್ಞಾನರ್ಜನೆಯನ್ನು ಪಡೆದುಕೊಳ್ಳಬೇಕು~ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಸಲಹೆ ನೀಡಿದರು.
ಕೇಂದ್ರೀಯ ಕನ್ನಡ ಅಧ್ಯಾಪಕ ಸಂಘವು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಕನ್ನಡ ಭಾಷಾಭೋಧನೆ ಸಂವರ್ಧನಾ ಕಾರ್ಯಕ್ರಮ~ದಲ್ಲಿ ಮಾತನಾಡಿದರು.`ಇತರೆ ರಾಜ್ಯಗಳಲ್ಲಿ ಮಾತೃಭಾಷೆಗೆ ಮಹತ್ವ ನೀಡುವಂತೆ ಅನ್ಯಭಾಷಿಕರ ಮಕ್ಕಳು ರಾಜ್ಯದಲ್ಲಿರುವ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು. ಪ್ರಾಥಮಿಕ ಶಾಲೆಯ ಮಾಧ್ಯಮ ಕನ್ನಡವಾಗಿದ್ದರೆ ಮಾತ್ರ ಮಕ್ಕಳು ಬೌದ್ಧಿಕ ಮತ್ತು ನೈತಿಕವಾಗಿ ಪ್ರಬುದ್ದರಾಗಲು ಸಾಧ್ಯವಿದೆ~ ಎಂದು ಅಭಿಪ್ರಾಯಪಟ್ಟರು.
`ಕೇಂದ್ರೀಯ ಶಾಲೆಗಳಲ್ಲಿ ಕನ್ನಡವನ್ನು ಉಳಿಸುವ ಅಗತ್ಯವಿದ್ದು, ಈ ದಿಸೆಯಲ್ಲಿ ಕನ್ನಡ ಅಧ್ಯಾಪಕರೆಲ್ಲರೂ ಸಂಘಟಿತರಾಗಿ ಹೋರಾಡಬೇಕು. ಇದಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ~ ಎಂದು ತಿಳಿಸಿದರು.
ಕವಿ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಮಾತನಾಡಿ, `ಕನ್ನಡಕ್ಕೆ ಕಿಟೆಲ್, ಮಾಸ್ತಿವೆಂಕಟೇಶ್ ಅಯ್ಯಂಗಾರ್, ಡಿವಿಜಿ ಸೇರಿದಂತೆ ಇತರೆ ಭಾಷಿಕರು ಮಹತ್ತರವಾದ ಕೊಡೆಗೆ ನೀಡಿದ್ದಾರೆ.
ಪ್ರಾಚೀನ ಭಾಷಾ ಪರಂಪರೆಯನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳುವ ಮೂಲಕ ಹೊಸ ಬಗೆಯ ಸವಾಲನ್ನು ಎದುರಿಸಬೇಕು~ ಎಂದು ಹೇಳಿದರು.ಬಿಬಿಯುಎಲ್ ಜೈನ್ ವಿದ್ಯಾಲಯದ ಪ್ರಾಂಶುಪಾಲರಾದ ಎಸ್.ಶ್ರೀದೇವಿ, ಸಂಘದ ಅಧ್ಯಕ್ಷ ನಾಗವೇಂದ್ರ ಸ್ವಾಮಿ ಚಿದರವಳ್ಳಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.