ADVERTISEMENT

ಹುತಾತ್ಮರ ದಿನಾಚರಣೆ: ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 20:05 IST
Last Updated 23 ಮಾರ್ಚ್ 2014, 20:05 IST

ಬೆಂಗಳೂರು:  ಆಮ್ ಆದ್ಮಿ ಪಕ್ಷ ಮತ್ತು ಛಾತ್ರ ಯುವ ಸಂಘಟನೆ ಸಮಿತಿಯು ಬ್ರಿಗೇಡ್ ರಸ್ತೆಯಲ್ಲಿ ಭಾನುವಾರ ‘ಹುತಾತ್ಮ ದಿನಾಚರಣೆ’ ಅಂಗವಾಗಿ ಜಾಗೃತಿ ಕಾರ್ಯಕ್ರಮ ಮತ್ತು ಹುತಾತ್ಮರಿಗೆ ಸಂಗೀತ ನಮನ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಈ ಕುರಿತು ಮಾತನಾಡಿದ ಚಾತ್ರ ಯುವ ಸಂಘಟನೆ ಸಮಿತಿಯ ಸಂಚಾಲಕ ಪವನ್‌ ಹೆಗಡೆ, ‘ಭಗತ್‌ಸಿಂಗ್‌, ರಾಜಗುರು, ಸುಖದೇವ್‌ ಅವರನ್ನು ಬ್ರಿಟಿಷ್‌ ಸರ್ಕಾರವು 1931 ರ ಮಾರ್ಚ್‌ 23 ರಂದು ಗಲ್ಲಿಗೇರಿಸಿತ್ತು. ಅವರ ನೆನಪಿಗಾಗಿ ಹಾಗೂ ಅವರ ತ್ಯಾಗ, ಬಲಿದಾನದ ಸ್ಮರಣೆಗಾಗಿ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ’ ಎಂದರು.

‘ಹುತಾತ್ಮ ದಿನವನ್ನು ದೇಶದಾದ್ಯಂತ ಆಚರಿಸ­ಲಾಗುತ್ತದೆ. ನಮ್ಮ ದೇಶದ ಯುವಕರಲ್ಲಿ ದೇಶ­ಭಕ್ತಿಯನ್ನು ಹೆಚ್ಚಿಸಿ, ಭಗತ್‌ ಸಿಂಗ್‌, ರಾಜಗುರು ಮತ್ತು ಸುಖದೇವ್‌ ಅವರ ಆದರ್ಶಗಳನ್ನು ಪಾಲಿಸು­ವಂತೆ ಅವರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯ­­ಕ್ರಮದ ಉದ್ದೇಶವಾಗಿದೆ’ ಎಂದು ಹೇಳಿದರು.

ಸ್ವಯಂ ಸೇವಕ ಪ್ರದೀಪ್‌, ‘ಯುವಕರು ದೇಶದ ಕುರಿತು ಯೋಚಿಸಬೇಕು. ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು. ದೇಶಕ್ಕಾಗಿ 23 ನೇ ವಯಸ್ಸಿನ­ಲ್ಲಿಯೇ ಪ್ರಾಣತೆತ್ತ ಭಗತ್‌ಸಿಂಗ್‌ ಆದರ್ಶವಾಗಬೇಕು. ಅಂದಿನ ಯುವಕರು ಬ್ರಿಟಿಷರ ವಿರುದ್ಧ ಹೋರಾಡಿ­ದರು. ಇಂದಿನ ಯುವಕರು ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು’ ಎಂದರು. ಅನೇಕ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಯೂತ್ ಫಾರ್ ನೇಷನ್‌ ಸಂಘಟನೆ: ಯೂತ್ ಫಾರ್­ ನೇಷನ್‌ ಸಂಘಟನೆ ಸ್ವಾತಂತ್ರ್ಯ ಉದ್ಯಾನ­ದಲ್ಲಿ ಭಾನುವಾರ ಹುತಾತ್ಮರ ದಿನಾಚರ­ಣೆ ಅಂಗ­ವಾಗಿ ಹುತಾತ್ಮ ನಮನ ಕಾರ್ಯಕ್ರಮ ಆಯೋ­ಜಿ­ಸಿತ್ತು.

ಸಂಘಟನೆಯ ಪ್ರಧಾನ ಕಾರ್ಯ­ದರ್ಶಿ ಎಸ್‌.ಸುನೀಲ್‌ ಕುಮಾರ್‌, ‘ದೇಶಕ್ಕಾಗಿ ಪ್ರಾಣ­ತೆತ್ತ ಭಗತ್‌ಸಿಂಗ್‌, ರಾಜಗುರು, ಸುಖದೇವ್‌ ಅವರ ತ್ಯಾಗ ಬಲಿದಾನದ ಸ್ಮರಣೆಗೆ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ’ ಎಂದರು.

‘ದೇಶಕ್ಕಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾ­ಡಿದ ಅಂತಹ ನಾಯಕರನ್ನು ದೇಶದ ಜನತೆ ಮರೆತಿ­ದ್ದಾರೆ. ಆದ್ದರಿಂದ, ಅವರ ಕುರಿತು ಇಂದಿನ ಪೀಳಿಗೆಗೆ ತಿಳಿಸಬೇಕಾಗಿದೆ’ ಎಂದು ಹೇಳಿದರು. ‘ಹುತಾತ್ಮರಿಗೆ ಮೇಣದ ಬತ್ತಿ ಹಚ್ಚಿ ಅವರನ್ನು ಸ್ಮರಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.